ಡಾ ರಾ.ಯ. ಧಾರವಾಡಕರ

ಧಾರವಾಡಕರ.. ಈ ಹೆಸರೇ ಅನ್ವರ್ಥಕನಾಮದಂತಿದೆ. ಮೂಲ ಬೇರು ಬಾಗಲಕೋಟೆಯಾಗಿದ್ದರೂ, ಶಿಕ್ಷಣ ಪಡೆದದ್ದು ಮಹಾರಾಷ್ಟ್ರದ ಸಾಂಗ್ಲಿಯಾಗಿದ್ದರೂ ಮೊದಲ ಕಾರ್ಯಕ್ಷೇತ್ರ ಮುಂಬೈಯಾಗಿದ್ದರೂ, ಧಾರವಾಡದ ಋಣಾನುಬಂಧವು ಈ ಮೇಧಾವಿ ಶಿಕ್ಷಕ, ಸಾಹಿತಿ, ಆಡಳಿತಗಾರರನ್ನು ಧಾರವಾಡಕ್ಕೆ ಎಳೆದು ತಂದಿತು. ವಿದ್ಯಾಗಿರಿಯ ಗುಡ್ಡ ಮೇಲೆ ತಲೆಯೆತ್ತಿ ನಿಂತ ಜನತಾ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದಲ್ಲಿ ಸುದೀರ್ಘಕಾಲ ಪ್ರಾಂಶುಪಾಲರಾಗಿ ಒಂದು ವಿದ್ಯಾಸಂಸ್ಥೆಯನ್ನು ಕಟ್ಟಿ ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ತಮ್ಮ ವಿದ್ವತ್ತಿನ ಬೆಳಕನ್ನು ಕೊಟ್ಟ ಶಿಕ್ಷಕರಾಗಿ, ಭಾಷಾಶಾಸ್ತ್ರಜ್ಞರಾಗಿ ಸಾಹಿತಿಗಳಾಗಿ ಧಾರವಾಡದ ಹೆಸರನ್ನು ತೇಜೋಮಯವಾಗಿ ಮಾಡಿದ ಅಸಾಧಾರಣ ವ್ಯಕ್ತಿ.

ಪ್ರೊ. ಧಾರವಾಡಕರರು ಹುಟ್ಟಿದ್ದು ಬಾಗಲಕೋಟೆಯಲ್ಲಿ ೧೯೧೯ರ ಜುಲೈ೧೫ರಂದು ಜನಿಸಿದರು. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ತಮ್ಮ ಬಿ.ಎ. ಡಿಗ್ರಿಗಾಗಿ ಕನ್ನಡ ಪ್ರಧಾನ ವಿಷಯ ಮತ್ತು ಇಂಗ್ಲೀಷನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿ ಪ್ರಥಮ ಗೌರವವನ್ನು ಪಡೆದರು. ೧೯೪೦ರಲ್ಲಿ ಫೆಲೋ ಆಗಿ ನಂತರ ಇಂಗ್ಲೀಷ್ ವಿಷಯದ ನಂತರ ರೇಶನಿಂಗ್ ಇಲಾಖೆಯಲ್ಲಿ ಕೆಲಸ ಮಾಡಿದರು. ಧಾರವಡದಲ್ಲಿ ಪ್ರಾರಂಭವಾದ ಕೆ.ಇ. ಬೋರ್ಡ್ನಲ್ಲಿ ಕನ್ನಡ ದಿಗ್ಗಜ ಬಿ.ಎಂ. ಶ್ರೀಕಂಠಯ್ಯನವರು ಪ್ರಿನ್ಸಿಪಾಲರಾಗಿದ್ದರು. ಆಗ ಧಾರವಾಡಕರರು ಈ ಸಂಸ್ಥೆಯತ್ತ ಆಕರ್ಷಿತರಾಗಿ ಬಂದು ಸೇರಿಕೊಂಡರು. ಬಿ.ಎಂ.ಶ್ರೀ ರವರು ತೀರಿದಾಗ ಅವರ ಸ್ಥಾನಕ್ಕೆ ಧಾರವಾಡಕರರನ್ನು ತಾತ್ಕಾಲಿಕ ಪ್ರಿನ್ಸಿಪಾಲರಾಗಿ ನೇಮಕ ಮಾಡಿದಾಗ ಅವರಿಗೆ ಕೇವಲ ೨೭ ವರ್ಷ. ೧೯೫೩ರಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಜೆ.ಎಸ್.ಎಸ್ ಅನ್ನು ಒಂದು ಉತ್ತಮ ಮಹಾವಿದ್ಯಾಲಯವನ್ನಾಗಿ ಮಾಡುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ೧೯೬೩ರಲ್ಲಿ ಮೂರು ತಿಂಗಳ ಕಾಲ ಅಮೇರಿಕ ಪ್ರವಾಸದ ಸೌಲಭ್ಯವು ದೊರೆಯಿತು.

ಕರ್ನಾಟಕದಲ್ಲಿಯ ವೃತ್ತಪತ್ರಿಕೆಗಳು, ನಮ್ಮ ದೇಶದ ಯೋಜನೆಗಳು, ಕನ್ನಡದಲ್ಲಿ ಕಾನೂನು, ಸಾಹಿತ್ಯ ಸಮೀಕ್ಷೆ, ಕನ್ನಡ ಭಾಷಾಶಾಸ್ತ್ರ, ಹೊಸಗನ್ನಡ ಸಾಹಿತ್ಯದ ಉದಯಕಾಲ ಮುಂತಾದವು ಇವರ ಪ್ರಮುಖ ಕೃತಿಗಳು. ಜೀವನ ಅರಿತ್ರೆ ನಿರೂಪಿಸುವಲ್ಲಿ ಲೇಖಕರ ಅನುಪಮ ಪ್ರಾವೀಣ್ಯದ ದರ್ಶನವಾಗುತ್ತದೆ. ಶಾಂತಕವಿಗಳ ಮೂರು ಕೀರ್ತನೆಗಳು, ಶ್ರೀ ವಿದ್ಯಾರಣ್ಯ ವಿಜಯ, ರಾವಣವೇದವತಿ, ಶ್ರೀ ಕೃಷ್ಣ ದಾನಾಮೃತ ಈ ಕೀರ್ತನೆಗಲನ್ನು ಬೆಳಕಿಗೆ ತಂದರು. ಅಮೇರಿಕನ್ ನಿಗ್ರೋ ಕತೆಗಳು ಹಾಗೂ ತೆರೆಯ ಹಿಂದೆ ಇವರ ಕಥಾ ಸಂಗ್ರಹಗಳು. ಧೂಮ್ರವಲಂಬಿಗಳು, ತೂರಿದ ಚಿಂತನೆಗಳು ಇವು ಧಾರವಾಡಕರರು ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರಕ್ಕೆ ಕೊಟ್ಟ ಅನನ್ಯರತ್ನಗಳೆಂದೇ ಹೇಳಬೇಕು.

ಪ್ರಬಂಧ ಸಾಹಿತ್ಯ ಚರಿತ್ರೆ, ಜೀವನ ಚರಿತ್ರೆ, ಸಂಶೋಧನೆ, ಕಥೆ, ವಿಮರ್ಶನದಂಥ ಸಾಹಿತ್ಯ ಪ್ರಕಾರಗಳಿಗೆ ಅತ್ಯುತ್ತಮ ಕೃತಿಗಳನ್ನು ನೀಡಿದ ಧಾರವಾಡಕರರು ಮುಂಬರುವ ಕನ್ನಡದ ಪೀಳಿಗೆಯ ಚಿಂತನ ಮಂಥನಕ್ಕೆ ಸಾಕಷ್ಟು ವಿಷಯ ನೀಡುವುದರ ಜೊತೆಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸುವಂಥ ಅಪರೂಪದ ಪ್ರೇರಣೆಗಳನ್ನು ನೀಡಿದ್ದಾರೆ.

ವಿದ್ಯಾವರ್ಧಕ ಸಂಘದ ಪುಸ್ತಕ ಬಹುಮಾನ, ಲೋಕ ಶಿಕ್ಷಣ ಪುಸ್ತಕ ಬಹುಮಾನ, ಹೀಗೆ ಹಲವಾರು ಪ್ರಶಸ್ತಿಗಳು ಬಂದವು. ತೂರಿದ ಚಿಂತನಗಳು ಪ್ರಬಂಧ ಸಂಗ್ರಹಕ್ಕೆ ಜಗದ್ಗುರು ಮೂರುಸಾವಿರ ಮಠದ ಸಾಹಿತ್ಯ ಪುರಸ್ಕಾರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದವು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಸಾರಾ ಅಬೂಬಕ್ಕರ

೨೦ನೇ ಶತಮಾನದ ಎಪ್ಪತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆಗಳು ಕಾಣಿಸಿಕೊಂಡವು. ತಮ್ಮ ಅಸ್ತಿತ್ವದ ಬಗೆಗೆ, ವಿಶಿಷ್ಟತೆಯ ಬಗೆಗೆ ಚಿಂತಿಸಲು ಪ್ರಾರಂಭಿಸಿದವರಲಿ ಮಹಿಳೆಯರು ಮತ್ತು ಮುಸ್ಲಿಂ ಲೇಕಕರು ಸೇರಿದರೆನ್ನುವುದು ಗಮನಾರ್ಹ. ಿವರು ತಮ್ಮ ಧರ್ಮದಲ್ಲಿ ನಡೆಯುತ್ತಿರುವ ಶೋಷಣೆಗಳನ್ನು, ಅಲ್ಲಿನ ದೋಷಗಳನ್ನು ಅಂಧಸಂಪ್ರದಾಯಗಳನ್ನು ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಸಲು ಪ್ರಾರಂಭಿಸಿದರು. ಇಂತಹ ಲೇಖಕರಲ್ಲಿ ಸಾರಾ ಅಬೂಬಕ್ಕರ ಅವರ ಹೆಸರು ಮಹತ್ವದಾಗಿರುತ್ತದೆ. ಇವರು ಸ್ವಧರ್ಮ, ಸ್ವಸಮಾಜ, ಸ್ವಸಂಸ್ಕೃತಿಯ ಪರಾಮರ್ಶ, ಪರಿಷ್ಕರಣದ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆಯಿಂದ ತಮ್ಮ ಸಮಾಜದ ಸಾಮಾಜಿಕ ವಾಸ್ತವವನ್ನು ಅನಾವರಣಗೊಳಿಸುವ ಸಾಹಸಕ್ಕಿಳಿದಿರುವ ಲೇಖಕಿ. ಇವರ ಪ್ರಯತ್ನ ತುಂಬಾ ಸಂಘರ್ಷದ ಮಾರ್ಗವಾಗಿದೆ.
ಕಾಸರಗೋಡಿನ ಹತ್ತಿರ ಚಮನನಾಡು ಎಂಬ ಹಳ್ಳಿ ಸಾರಾ ಅವರ ಹುಟ್ಟೂರು. ಸುಸಂಸ್ಕೃತ ಮತ್ತು ವಿದ್ಯಾವಂತ ಮನೆತನದಲ್ಲಿ ಹೆಣ್ಣುಮಕ್ಕಳಿಗಾಗಿ ಹರಕೆ ಹೊತ್ತು ಹೆತ್ತ ಮಗು ಸಾರಾ. ಇವರ ತಂದೆ ಪ್ರಸಿದ್ಧ ವಕೀಲರಾಗಿದ್ದರು. ಅವರ ವೈಚಾರಿಕ ಪ್ರಜ್ಞೆಯಿಂದ ತಮ್ಮ ಸಮುದಾಯದ ನೀತಿಯನ್ನು ಹುಸಿಗೊಳಿಸಿ ತಮ್ಮ ಮಗಳು ಸಾರಾ ಅವರನ್ನು ವಿದ್ಯಾವಂತರನ್ನಾಗಿಸಿದರು. ಕಾಸರಗೂಡಿನಲ್ಲಿ ಶಾಲೆಗೆ ಹೋಗುವ ಪ್ರಥಮ ಮುಸ್ಲಿಂ ಹುಡುಗಿಯಾಗಿದ್ದ ಕಾರಣ ಅವರು ತಮ್ಮ ಸಮುದಾಯದ ಜನರಿಂದ ಅನೇಕ ಕಿರುಕುಳ ಅನುಭವಿಸಿದರು. ಪ್ರಥಮವೆನ್ನುವುದೆಲ್ಲಾ ಸಂಘರ್ಷದಿಂದ ಕೂಡಿರುತ್ತದೆನ್ನುವುದಕ್ಕೆ ಸಾರಾ ಅವರ ವಿದ್ಯಾಭ್ಯಾಸವೇ ಸಾಕ್ಷಿ. ಈ ಕಷ್ಟಗಳ ನಡುವೆಯೇ ಅವರು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣ ಪೂರ್ತಿಗೊಳಿಸಿದರು.

ಎಕ್ಸಿಕ್ಯೂಟೀವ್ ಎಂಜಿನಿಯರ್ ಎಂ. ಅಬೂಬಕ್ಕರ ಅವರೊಂದಿಗೆ ಸಾರಾ ಅವರ ವಿವಾಹ ನಡೆಯಿತು. ಅವರದು ಅತ್ಯಂತ ದೊಡ್ಡ ಸಂಪ್ರದಾಯಸ್ಥ ಕುಟುಂಬ. ಕಟ್ಟುನಿಟ್ಟಾಗಿ ಬುರ್ಕಾ ಪದ್ಧತಿ ಪಾಲಿಸುತ್ತಿದ್ದರು. ಆ ಮನೆಯಲ್ಲಿ ಸಾರಾ ಅವರಿಗೆ ಪತ್ರಿಕೆಗಳನ್ನು ಓದಲು ಕಷ್ಟವಾಗುತ್ತಿತ್ತು. ಎಲ್ಲರೂ ಓದಿದ ನಂತರ ಹರಿದ ಚೂರು ಚೂರಾದ ಪತ್ರಿಕೆಗಳನ್ನು ಹೊಂದಿಸಿಕೊಂಡು ರಾತ್ರಿಯೇ ಓದಬೇಕಾದ ಸಂದರ್ಭ. ತಮ್ಮ ಪತಿಗೆ ಬೆಂಗಳೂರಿಗೆ ವರ್ಗಾವಣೆಯಾದ ಸಂದರ್ಭವು ಸಾರಾ ವರಿಗೆ ಪಂಜರದ ಹಕ್ಕಿಯನ್ನು ಹಾಇ ಬಿಟ್ಟಂತಾಯಿತು. ಅಲ್ಲಿಂದ ಸಾರಾ ಅವರ ಅಧ್ಯಯನ ಪ್ರಾರಂಭವಾಗಿ, ತಾವು ಲೇಖಕಿಯಾಗಬೇಕೆಂಬ ಆಶೆ ಮೂಡಿತು. ಅಂಕುರಗೊಂಡ ಭಾವನೆಗಳನ್ನು ಸಾಧಿಸಲು ಸಾರಾ ಅವರಿಗೆ ನಲ್ವತ್ತೈದು ವರ್ಷ ಆಗುವವರೆಗೂ ಸಾಧ್ಯವಾಗಲಿಲ್ಲ. ಬಿಜಾಪುರದ ನಾಜಿಮಾ ಭಾಂಗೆ ಎಂಬ ಮುಸ್ಲಿಂ ಮಹಿಳೆ ಸಿನೇಮಾ ನೋಡಬಾರದು ಎಂಬ ಫತ್ವಾ ಹೊರಡಿಸಿದರ ವಿರುದ್ಧ ಸಿಡಿದೆದ್ದ ಸಮಾಜದಿಂದ ಬಹಿಷ್ಕಾರ ಹೊಂದಿದ್ದಳು ಈ ಫತ್ವಾ ವಿರೋಧಿಸಿ ಭಾಂಗೆಗೆ ಕೊಟ್ಟ ಕಿರುಕುಳ ವಿರೋಧಿಸಿ ಸಾರಾ ವರ ಪ್ರತಿಕ್ರಿಯೆಯನ್ನು ಲಂಕೇಶ ಪತ್ರಿಕೆ ಪ್ರಕಟಿಸಿತು. ಈ ಪ್ರತಿಕ್ರಿಯೆ ನೋಡಿ ಪಿ. ಲಂಕೇಶ ಅವರು ತಮ್ಮ ಧರ್ಮದ ಕುರಿತು ಒಂದು ಕಾದಂಬರಿ ಬರೆದು ಕೊಡಿಯೆಂದು ಕೇಳಿದ ಕಾರಣ ಸಾರ ಅವರು ಚಂದ್ರಗಿರಿ ತೀರದಲ್ಲಿ ಕಾದಂಬರಿ ಬರೆದರು.
ಇವರು ಸೃಜನ ಮತ್ತು ಸೃಜನೇತರ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೆರಡು ಕೃತಿಗಳನ್ನು ರಚಿಸಿದ್ದಾರೆ. ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು ಮುಂತಾದ ಕಾದಂಬರಿಗಳನ್ನು, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ ಎಂಬ ಕಥಾ ಸಂಕಲಗಳನ್ನು, ಲೇಖನಗುಚ್ಛ, ಅನಾವರಣ ಎಂಬ ವಿಚಾರ ಸಾಹಿತ್ಯ ಕುರಿತ ಸಂಕಲನಗಳನ್ನು ರಚಿಸಿದ್ದಾರೆ. ಹೊತ್ತು ಕಂತುವ ಮುನ್ನ ಎಂಬ ಆತ್ಮಕಥೆ ಕೃತಿಗಳನ್ನು ರಚಿಸಿ ಸಾರಾ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಒಂದು ಛಾಪನ್ನು ಒತ್ತಿದ್ದಾರೆ.
ಲೇಖನ ಗುಚ್ಛ ಮತ್ತು ಅನಾವರಣ ಇವರ ವೈಚಾರಿಕ ಸಾಹಿತ್ಯ ಕುರಿತಾದ ಕೃತಿಗಳು. ಇಲ್ಲಿ ಇವರ ಧರ್ಮದಲ್ಲಿ ಮಹಿಳಾ ಶೋಷಣೆಯ ಕಾರಣಗಳನ್ನು ಶೋಧಿಸುತ್ತಾರೆ. ಪ್ರಶ್ನಾತೀತವಾದ ಇವರ ಧರ್ಮದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಧರ್ಮದ ಅನೇಕ ವಲಯಗಳಿಂದಲೂ ಮಹಿಳಾ ಶೋಷಣೆ ನಡೆಯುತ್ತದೆ, ಈ ಧರ್ಮದ ಕುರುಡು ನಂಬಿಕೆಗಳು, ಕಾನೂನುಗಳು, ಮಹಿಳಾ ಮಸೂದೆಗಳೆಲ್ಲವೂ ಮಹಿಳೆಯರ ಸ್ಥಿತಿ ಗೌಣವಾಗಿರಲು ಕಾರಣವಾಗಿದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.
ಹೀಗೆ ಸಾರಾ ಅವರು ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಮಾಜಿಕ, ನೈತಿಕ ವ್ಯವಸ್ಥೆಯ ಸ್ತ್ರೀ ವಿರೋಧಿ ನೀತಿಯನ್ನು ಅತ್ಯಂತ ನಿರ್ಭೀತಿಯಿಂದ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಬರಹಗಳಲ್ಲಿ ಪ್ರಶ್ನಿಸುತ್ತಾ, ಸ್ತ್ರೀಪರ ಜೀವಪರ ವ್ಯವಸ್ಥೆಯ ನಿರ್ಮಾಣಕ್ಕಾಗಿ ಸೃಜನಾತ್ಮಕವಾಗಿ ಪ್ರಯತ್ನಿಸಿದ್ದಾರೆ. ಅವರ ಮೊದಲ ಕಾದಂಬರಿ ತಮಿಳು, ಇಂಗ್ಲೀಷ್ ಮತ್ತು ಇತರ ಭಾಷೆಗಳಿಗೆ ಭಾಷಾಂತರಗೊಂಡಿದೆ. ಹೀಗೆ ಸಮಾಜದ ಶುದ್ಧೀಕರಣವನ್ನಿಟ್ಟುಕೊಂಡು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ತೀವ್ರವಾಗಿ ಮುಸ್ಲಿಂ ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಿಸಿದ ಸಾರಾ ಅವರ ಸಾಹಿತ್ಯಕ್ಕೆ ವಿಶಿಷ್ಟ ಮೌಲ್ಯ ದೊರೆತಿದೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಕುಂ. ವೀರಭದ್ರಪ್ಪ

ಕನ್ನಡದ ಮುಖ್ಯ ಲೇಖಕರಲ್ಲಿ ಒಬ್ಬರಾಗಿ ವೈವಿಧ್ಯಮಯವಾದ ಮತ್ತು ಹೊಸತಾದ ಸಾಹಿತ್ಯಲೋಕವನ್ನು ತೆರೆದಿಟ್ಟವರು ಕುಂವೀ. ಕನ್ನಡ ಸಾಹಿತ್ಯವು ನವ್ಯದ ಅಂತರ್ಮುಖತೆಯಿಂದ ಹೊರಬಂದು ಬಂಡಾಯದ ಕೆಚ್ಚನ್ನು ಪಡೆದುಕೊಳ್ಳುತ್ತಿದ್ದಾಗ ತುಳಿತಕ್ಕೋಳಗಾದವರ ಮತ್ತು ನತದೃಷ್ಟರ ಬದುಕನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಣ ಮಾಡುವುದರೊಂದಿಗೆ ಇಡೀ ಸಾರಸ್ವತ ಲೋಕದ ಗಮನ ಸೆಳೆದರು. ರಾಯಲಸೀಮೆಯ ಜಮೀನ್ದಾರಿ ವ್ಯವಸ್ಥೆಯ ಕ್ರೂರತೆಯನ್ನು ಅವರಂತೆ ಅನಾವರಣ ಮಾಡಿದವರು ವಿರಳ.

ಇವರು ಶ್ರಮಿಸಿದ ಹಾದಿ ಮಾತ್ರ ತುಂಬ ದುರ್ಗಮ. ಆಂಧ್ರದ ಹಳ್ಳಿಯಲ್ಲಿ ಕನ್ನಡ ಶಾಲೆಯ ಮಾಸ್ತರನಾಗಿ ಆ ಪ್ರದೇಶದಲ್ಲಿ ಮನೆ ಮಾಡಿದ್ದ ಕ್ರೂರ ಊಳಿಗಮಾನ್ಯ ವ್ಯವಸ್ಥೆಯನ್ನು ಅಕ್ಷರಗಳ ಮೂಲಕ ಅವರು ಬೆಳಕಿಗೆ ಹಿಡಿದರು. ಗ್ರಾಮೀಣ ಬಡತನ, ಅಸಮಾನ ಬೆಳವಣಿಗೆ ಮತ್ತು ಕಗ್ಗತ್ತಲಲ್ಲಿ ಇರುವ ನಾಗರಿಕತೆಗಳನ್ನು ಸಮಾಜಕ್ಕೆ ಮುಖಾಮುಖಿಯಾಗಿಸಿದರು. ಇನ್ನಾದರೂ ಸಾಯಬೇಕು ಎನ್ನುತ್ತಿದ್ದ ಜನತೆಯಲ್ಲಿ ಬದುಕಿನ ಚೈತನ್ಯ ಮೂಡಿಸುವಲ್ಲಿ ಆ ಕತ್ತಲ ಜಗತ್ತನ್ನು ಬೆಳಕಿಗೆ ಸರಿಸುವಲ್ಲಿ ಕುಂವೀ ಸಾಹಿತ್ಯ ನಿರ್ವಹಿಸಿದ ಪಾತ್ರವು ಮಹತ್ತರವಾದುದಾಗಿದೆ.

ತಾವು ಕಂಡುಂದ ಬೇಗ ಬವಣೆಗಳನ್ನು ಚಿತ್ರಿಸಲು ಸಮರ್ಥವಾಗಿ ಸಾಹಿತ್ಯವನ್ನು ಉಪಯೋಗಿಸಿಕೊಂಡ ಕುಂವೀ ಪುಂಖಾನುಪುಂಖವಾಗಿ ಕತೆಗಳನ್ನು ಬರೆದರು. ಅವು ವಿಶಿಷ್ಟ್ರವೂ ಪ್ರಯೋಗಶೀಲವೂ ಆಗಿದ್ದುದರಿಂದ ಬಹುಬೇಗನೆ ಅವರು ಅಪಾರ ಓದುವ ವರ್ಗವನ್ನು ಕಂಡುಕೊಂಡರು. ಈವರೆಗೆ ಇವರು ಹದಿನಾಲ್ಕು ಕಥಾ ಸಂಕಲನಗಳನ್ನು, ಹದಿನೇಳು ಕಾದಂಬರಿಗಳನ್ನು ಗಾಂಧಿ ಕ್ಲಾಸು ಎನ್ನುವ ಆತ್ಮಕಥೆಯನ್ನು, ನಾಲ್ಕು ಅನುವಾದ ಕೃತಿಗಳನ್ನು ನಾಲ್ಕು ಜೀವನ ಚರಿತ್ರೆಗಳನ್ನು ಒಂದು ವಿಮರ್ಶಾ ಕೃತಿಯನ್ನು ಹಾಗೂ ದಿವಿ ಸೀಮೆಯ ಹಾಡು ಎನ್ನುವ ಕವನ ಸಂಕಲವನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ ಲೇಖಕನೆಂದು ಗುರುತಿಸಲ್ಪಟ್ಟಿದ್ದಾರೆ.

ಇವರ ಮೊದಲ ಕಾದಂಬರಿ ಕಪ್ಪು, ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನವನ್ನು ದೊರಕಿಸಿಕೊಟ್ಟಿತು. ಅವರ ಮಹತ್ವಾಂಕಾಂಕ್ಷಿ ಕಾದಂಬರಿ ಅರಮನೆಗೆ ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿತು. ಅವರ ಶಾಮಣ್ಣ ಕಾದಂಬರಿ ಮೇಲ್ಜಾತಿ ವ್ಯಕ್ತಿಯೊಬ್ಬನ ಬದುಕಿನ ಸಂದಿಗ್ಧತೆ ಮತ್ತು ದುರಂತಗಳನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ. ವ್ಯಕ್ತಿತ್ವಶೋಧ ಮಹತ್ವದ್ದಾಗುತ್ತದೆ. ಅವರ ಮತ್ತೊಂದು ಮಹತ್ವದ ಕಾದಂಬರಿ ಕೂರ್ಮಾವತಾರದಲ್ಲಿ ಕುಬ್ಜನಾಗಿದ್ದ ವ್ಯಕ್ತಿ ಮಹಾತ್ಮಾ ಗಾಮ್ಧಿಯ ಪಾತ್ರ ನಿರ್ವಹಿಸುತ್ತ ಮಹಾತ್ಮನ ಅಂಶಗಳನ್ನು ಪಡೆದುಕೊಳ್ಳುವುದು ಕಾದಂಬರಿಯ ಎದ್ದು ಕಾಣುವ ಅಂಶವಾಗಿದೆ. ಅವರ ಇತ್ತೀಚಿನ ಹೇಮರೆಡ್ಡಿ ಮಲ್ಲಮ್ಮನ ಕಥೆಯು ಕಾದಂಬರಿಯಲ್ಲಿ ಸಾಂಪ್ರದಾಯಿಕ ಹೇಮರೆಡ್ಡಿ ಮತ್ತು ಮಲ್ಲಮ್ಮನಿರದೆ ಆ ನಾಟಕದ ಪ್ರಸ್ತಾಪದೊಂದಿಗೆ ಜೀವನ ನಾಟಕದ ಅಂಕಗಳನ್ನು ಓದುಗರ ಮುಂದೆ ತರುತ್ತಾರೆ.

ಹಸಿವನ್ನು ಮೆಟ್ಟಿ ನಿಂತು, ನಾಡು ಸುತ್ತಿ, ವಿವಿಧ ಅನುಭವಗಳನ್ನು ಅರಗಿಸಿಕೊಂಡು ಲೇಕಹಿನ್ಯನ್ನು ಸದಾ ಹರಿತ ಖಡ್ಗವಾಗಿಸಿಕೊಂಡ ಕುಂವೀ ತಮ್ಮ ಅಪಾರ ಸಾಹಿತ್ಯ ಸಾಧನೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಹುಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಪ್ರೊ. ಲಿಂಗದೇವರು ಹಳೆಮನೆ

ಪ್ರೊ. ಲಿಂಗದೇವರು ಹಳೆಮನೆಯವರದು ಬಹುಮುಖ ವ್ಯಕ್ತಿತ್ವ. ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದ ಇವರು ಭಾಷಾಶಾಸ್ತ್ರಜ್ಞರು, ವಿಮರ್ಶಕರು, ಸಂಶೋಧಕರು, ಸಾಹಿತ್ಯ ಚಿಂತಕರು, ನಾಟಕಕಾರರಾಗಿದ್ದರು. ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಹಳ ಸರಳ ಸ್ವಭಾವದ ಸಜ್ಜನಿಕೆಯ ಗುಣ ಸಂಪನ್ನರು. ಹಿರಿದಪ್ಪ ರಾಜ್ಯವನಿತ್ತಡೊಲ್ಲೆ ಎನ್ನುವ ನಿಷ್ಠುರ ಜಂಗಮರಾಗಿದ್ದರು. ಸಿಟ್ಟಿದ್ದಲ್ಲಿ ರೊಟ್ಟಿ ಇರುವುದು ಎನ್ನುವ ಹಾಗೆ ನಯದೊಂದಿಗೆ ನಿಷ್ಠುರತೆಯು ಹಳೆಮನೆಯವರಲ್ಲಿತ್ತು. ವಿದ್ಯಾರ್ಥಿಗಳಿಗೆ ಒಂದು ತಾಸು ಪಾಠ ಮಾಡಬೇಕಾದರೆ ಅದರ ಹಿಂದೆ ಸತತ ಅಧ್ಯಯನ, ಕಠಿಣ ಪರಿಶ್ರಮ ಬೇಕು ಎನ್ನುತ್ತಿದ್ದರು. ಬದುಕನ್ನು ಜೀವನದಲ್ಲಿ ಕಾಣಬೇಕೆಂಬ ತವಕವಿದ್ದ ಸೃಜನಶೀಲ ವ್ಯಕ್ತಿಯಾಗಿದ್ದರು. ಆದ್ದರಿಂದ ಸಾಹಿತ್ಯೇತರ ಕ್ಷೇತ್ರ ಸಾಫ್ಟವೇರ್ ಡಿಸೈನ್ನಲ್ಲೂ ಸಾಧನೆ ಮಾಡಿದ್ದರು.

ಇವರು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ಹಾಲುಗೋಣ ಎಂಬ ಪುಟ್ಟ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ೧೯೪೯ರಲ್ಲಿ ಜನಿಸಿದರು. ತಿಪಟೂರಿನಲ್ಲಿ ಬಿ.ಎ. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಣಾನ ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೋಧನಾ ಸಾಮಗ್ರಿಗಳ ತಯಾರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಭಾಷಾ ಮಂದಾಕಿನಿ ಯೋಜನೆಗಳ ಮುಖ್ಯಸ್ಥರಾಗಿ ಯಶಸ್ವಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಸೆಂಟರ್ ಎನ್ನುವ ತಾಣವೊಂದನ್ನು ಪ್ರಾರಂಭಿಸಿದರು. ಭಾರತ ಸಾಕ್ಷರತಾ ಮಿಷನ್ನಿನ ನಿರ್ದೇಶಕರೂ ಕೂಡ ಆಗಿದ್ದರು.

ಇವರು ವಿಶೇಷವಾಗಿ ರಂಗಭೂಮಿಗೆ ಹೆಚ್ಚಿನ ಒಲವನ್ನು ತೋರಿದಂತೆ ಕಾಣುವುದು. ಅವರು ಚಿಕ್ಕದೇವರ ಭೂಪ, ತಸ್ಕರ, ಹೈದರ್ ಹೀಗೆ ೭ ನಾಟಕಗಳನ್ನು ರಚಿಸಿದ್ದಾರೆ, ಬ್ರೇಕ್ಟ್ ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರೆ. ಭಾಷೆ ಎನ್ನುವ ಕೃತಿಯನ್ನು ನವಸಾಕ್ಷರರಿಗಾಗಿ ಹೊರ ತಂದಿದ್ದಾರೆ. ಈ ಕೃತಿಯು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಭಾಷೆಗಳ ಮೂಲಕ ಕನ್ನಡ ಕಲಿಯಲು ಮೂಲ ಪಠ್ಯವನ್ನು ರಚಿಸಿದ್ದಾರೆ. ಇವರು ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ನೀಡಿದ ವರದಿ ಮೌಲ್ಯಯುತವಾದುದು. ಭಷೆಯ ಪ್ರಾಚೀನತೆಯನ್ನು ಗುರುತಿಸುವಂತಹ ಮಾನದಂಡಗಳು, ಅದಕ್ಕೆ ತಕ್ಕಂತಹ ಪರಿಸರವನ್ನು, ಸಾಕ್ಷ್ಯಾಧಾರಗಳನ್ನು ನೀಡಿದ್ಧಾರೆ.

ಇವರು ಅಲ್ಲಮನ ಭಾಷಾ ವಿಜ್ಞಾನವನ್ನು ಪರಿಚಯಿಸಿದರು, ಕವಿರಾಜಮಾರ್ಗದ ಭಾಷಾಶಾಸ್ತ್ರವನ್ನು ಅರ್ಥೈಸಿದ್ದರು. ಅರಹು-ಕುರುಹು ಪತ್ರಿಕೆಯ ಸಂಪಾದಕರಾಗಿ ಉತ್ತಮ ಸಾಹಿತ್ಯವನ್ನು ಸಮಾಜಮುಖಿಯಾಗಿ ಜನಪರವಾಗಿ ಪ್ರಕಟಿಸಿದರು. ಇವರು ರಚಿಸಿದ್ದ ಪ್ರಸಿದ್ಧ ನಾಟಕ “ಗುಡಿಯಂಕ ಕುಡಿಮದ್ದು” ದೆಹಲಿಯಲ್ಲಿ ಪ್ರದರ್ಶನ ಗೊಂಡಿತು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ ವೀಣಾ ಶಾಂತೇಶ್ವರ

ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಣ್ಣ ಕತೆಯ ಪರಂಪರೆಯಲ್ಲಿ ವ್ಯಕ್ತಿವಿಶಿಷ್ಟತೆಯಿಂದ ಚಾರಿತ್ರಿಕ ಮಹತ್ವ ಪಡೆದ ಪ್ರತಿಭಾವಂತರಲ್ಲಿ ವೀಣಾ ಶಾಂತೇಶ್ವರರು ಒಬ್ಬರು. ಬಾಲ್ಯದಿಂದಳು ಪ್ರಗತಿಪರ ವೈಚಾರಿಕತೆಯ ಸ್ತ್ರೀವಾದಿಯಾಗಿ ಬೆಳೆದ ಅವರು ಸಹಜವಾಗಿ ಆಯ್ದುಕೊಂಡದ್ದು ನವ್ಯದ ಆತ್ಮಶೋಧದ ನೈಜವಾಸ್ತವವಾದವನ್ನು. ಶೈಲಿ ಮತ್ತು ಭಾಷೆಯ ಬಳಕೆಯಲ್ಲಿ ಅವರದು ವಿಭಿನ್ನ ದಾರಿ.

ವೀಣಾ ಅವರು ೧೯೫೪ರಲ್ಲಿ ಧಾರವಾಡದಲ್ಲಿ ಜನಿಸಿದರು. ಬಾಲ್ಯ ಶಿಕ್ಷಣ ಪಡೆದದ್ದು ಬಾಗಲಕೋಟೆಯಲ್ಲಿ. ತಂದೆ ಬಲರಾಮಾಚಾರ್ಯ ಯಲಬುರ್ಗಿ ಪ್ರಸಿದ್ಧ ಪ್ರಾಧ್ಯಾಪಕರು ಮತ್ತು ಮೇಧಾವಿ ವಿಜ್ಞಾನಿಯಾಗಿದ್ದರು ಅವರು ಆಯುರ್ವೇದದಲಿ ಅನೇಕ ಹೊಸ ಶೋಧನೆಗಳನ್ನು ಮಾಡಿ ಧನ್ವಂತರಿ ಎನ್ನುವ ಖ್ಯಾತಿ ಪಡೆದಿದ್ದರು. ತಾಯಿ ಇಂದಿರಾ ಮರಾಠಿ ಮಾತೃಭಾಷೆಯ ಸಾಹಿತ್ಯ ಮತ್ತು ಶಿಕ್ಷಣ ಪ್ರೇಮಿಯಾಗಿದ್ದರು. ತಾಯಿಯ ಸ್ತ್ರೀಪರತೆ, ವೈಚಾರಿಕತೆಯಿಂದ ಪ್ರಭಾವಿತರಾದಂತೆ, ತಂದೆಯವರ ವೈಜ್ಞಾನಿಕ ಮನೋಭಾವ, ಧರ್ಮಶ್ರದ್ಧೆ, ಕರ್ತವ್ಯನಿಷ್ಠೆ, ಸಾಮಾಜಿಕ ಕಾಳಜಿಯ ಗುಣಗಳಿಂದ ಪ್ರೇರಣೆ ಪಡೆದರು. ೧೯೬೦ರಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ರಾಂಕ್, ಪಿ.ಯು ಪರೀಕ್ಷೆಯಲ್ಲಿ ೨ನೇ ರಾಂಕ್ ಪಡೆದು ಬಿ.ಎ ಪದವಿಯನ್ನು ಆಕ್ಕೆ ಮಾಡಿ ಪ್ರಥಮ ರಾಂಕ್ನಿಂದ ತೇರ್ಗಡೆಯಾಗಿ, ಸ್ನಾತಕೋತ್ತರ ಪದವಿಯನ್ನು ಇಂಗ್ಲೀಷ್ ಅಧ್ಯಯನದಲ್ಲಿ ಮೊದಲ ರಾಂಕ್ ನಲ್ಲಿ ತೇರ್ಗಡೆಯಾದರು.

ತಾವು ವಿದ್ಯಾರ್ಥಿಯಾಗಿದ್ದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿ ಸೇವೆ ಪ್ರಾರಂಭ ಮಾಡಿ ೩೯ ವರ್ಷ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಇಂಗ್ಲೀಷ್, ಮರಾಠಿ, ಮತ್ತು ಹಿಂದಿ ಕೃತಿಗಳನ್ನು ಅನುವಾದಿಸಿದರು. ಕತೆಗಾರ್ತಿಯಾಗಿ ಪ್ರಸಿದ್ಧರಾಗಿರುವ ವೀಣಾ ಕಳೆದ ನಾಲ್ಕು ದಶಕಗಳಲ್ಲಿ ಪ್ರಕಟಿಸಿರುವ ಕಥಾಸಂಕಲನಗಳು ಆರು. ಮುಳ್ಳುಗಳು ಮೊದಲ ಸಂಕಲನ ಅವರನ್ನು ಕನ್ನಡ ಸಣ್ಣಕತೆಯ ಪರಂಪರೆಯಲ್ಲಿ ಪ್ರಮುಖರನ್ನಾಗಿ ಪ್ರತಿಷ್ಠಾಪಿಸಿದರೆ, ನಂತರದ ಕೊನೆಯ ದಾರಿ, ಕವಲು, ಹಸಿವು, ಬಿಡುಗಡೆ ನಡೆದದ್ದೇ ದಾರಿ ಸಂಕಲನಗಳು ಅವರ ಕಥನ ಸಾಮರ್ಥ್ಯ, ಪ್ರಖರ ವೈಚಾರಿಕತೆ ಮತ್ತು ಸ್ತ್ರೀಪರ ಕಾಳಜಿಗಳನ್ನು ಪರಿಚಯಿಸಿದವು. ಅವರ ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಕತೆ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಉತ್ತಮ ಅನುವಾದಕ್ಕಾಗಿ “ನದೀ ದ್ವೀಪಗಳು” ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.

ಬೇರೆ ಬೇರೆ ಸಾಹಿತ್ಯಕ ಸಂಸ್ಥೆಗಳಿಗಾಗಿ ವೀಣಾ ವರು ಪ್ರಾತಿನಿಧಿಕ ಕಥಾ ಸಂಕಲನಗಳನ್ನು ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಹೊಸ ಹೆಜ್ಜೆ, ಲೇಖಕಿಯರ ಕಥಾಸಂಕಲನ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಕಥೆಗಳನ್ನಾಧರಿಸಿ ವೀಣಾ ರಚಿಸಿರುವ ರೇಡಿಯೋ ನಾಟಕಗಳು ೧೦. ನಾಡಿನ ದೇಶದ ಅನೇಕ ಪ್ರತಿಷ್ಟಿತ ಸಂಘ ಸಂಸ್ಥೆಗಳೊಂದಿಗೆ ಕ್ರಿಯಾಶೀಲ ಸಂಬಂಧ ಹೊಂದಿರುವ ಅವರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಸುದರ್ಶನ ದೇಸಾಯಿ

ಸುದರ್ಶನ ಕೃಷ್ಣರಾವ ಮುತಾಲಿಕದೇಸಯಿ ಎಂಬುದು ಅವರ ಪೂರ್ಣ ಹೆಸರು. ಸಾಹಿತ್ಯ ಕ್ಷೇತ್ರದಲ್ಲಿ ಸುದರ್ಶನ ದೇಸಾಯಿ ಎಂದೇ ಪರಿಚಿತರು. ಇವರು ಹುಟ್ಟಿದ್ದು ೧೯೪೫ರ ಸಂಕ್ರಾಂತಿಯ ದಿನ. ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಹಾಗೂ ಟಿ.ಸಿ.ಎಚ್ ತರಬೇತಿ ಪಡೆದದ್ದು ಧಾರವಾಡದಲ್ಲಿ. ಹಿಂದಿ ವಿಷಯದಲ್ಲಿ ಆಸಕ್ತಿ ಹೊಂದಿದ ಅವರು ಹಿಂದಿ ವಿಶಾರದ ಪದವಿ ಪಡೆದರು. ದಾಂಡೇಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಆ ಹೊತ್ತಿಗೆ ಚೌಪದಿ ಕವಿ ಎಂದು ಪ್ರಸಿದ್ಧರಾದ ದಿನಕರ ದೇಸಾಯಿ ಅವರ ಪರಿಚಯವಾಯಿತು, ಇದರಿಂದ ಇವರ ಸಾಹಿತ್ಯಾಸಕ್ತಿ ವೃದ್ಧಿಸಲು ಆರಂಭಿಸಿತು. ನಂತರ ಧಾರವಾಡ ವಲಯದ ಗುಲಗಂಜಿಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ ೩೨ ವರ್ಷ ಸೇವೆ ಸಲ್ಲಿಸಿ ಉಣಕಲ್ಲ ಶಾಲೆಯಿಂದ ಸ್ವಯಂನಿವೃತ್ತಿ ಪಡೆದರು.

ಸಾಹಿತ್ಯ ಕ್ಷೇತ್ರದಲ್ಲಿ ೧೯೭೯ ರಿಂದ ತೊಡಗಿಸಿಕೊಂಡರು. ಮೂಲತಃ ಸಣ್ನಕತೆಗಾರರಾಗಿ ಸುಮಾರು ೫೦ರಷ್ಟು ರೋಚಕ ಕಥೆಗಳನ್ನು ರಚಿಸಿದ್ದಾರೆ. ೨೦-೨೫ ಹಾಸ್ಯ ಲೇಖನಗಳನ್ನು ರಚಿಸಿದ್ದಾರೆ. ೮-೧೦ ಬಾನುಲಿ ನಾಟಕಗಳನ್ನು, ೧೫-೨೦ ಸಾಮಾಜಿಕ ವೈಜ್ಞಾನಿಕ, ಮನೋವೈಜ್ಞಾನಿಕ ಕಾದಂಬರಿಗಳನ್ನು ೫೦ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ, ಸಾಂಸ್ಕೃತಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸುದರ್ಶ ದೇಸಾಯಿ ಅವರು ಸಾಹಿತ್ಯ ಸಂಗೀತ ಕಲಾನಿಕೇತನ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ ತಮ್ಮ ಕುಟುಂಬದ ಸದಸ್ಯರೆಲ್ಲರನ್ನು ಆ ಸಂಸ್ಥೆಯ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದರು. ಈ ಎಲ್ಲಾ ಸಂಘಟನೆಯ ಪೂರ್ಣ ಜವಾಬ್ದಾರಿಯನ್ನು ಪತ್ನಿ ಸುಜಾತಾ ದೇಸಾಯಿ ಅವರಿಗೆ ವಹಿಸಿದರು. ಅವರ ಮೂರು ಹೆಣ್ಣುಮಕ್ಕಳನ್ನೊಳಗೊಂಡಂತೆ ಸುವಿರೇಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹಲವಾರು ಪ್ರಕಟಣೆ ಮಾಡಿದ್ದು ಕೂಡ ಅವರ ಸಾಹಸದ ಕೆಲಸವೇ ಸರಿ.

ಅವರು ರಚಿಸಿದ ಕಾದಂಬರಿಗಳಲ್ಲಿ ಹಲವು ಚಲನಚಿತ್ರಗಳಾಗಿ ಪರದೆಯ ಮೇಲೆ ಬಂದವು. ಮಾನಸ ಸರೋವರ, ಅರುಣರಾಗ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಬಾಡದ ಹೂವು, ಶರವೇಗದ ಸರದಾರ, ಕೆರಳಿದ ಸರ್ಪ, ಎಂಟೆದೆಯ ಬಂಟ, ಮೃತ್ಯುಬಂಧನ ಅಶ್ವಮೇಧ ಮುಂತಾದವು. ಅವುಗಳಲ್ಲಿ ಹಲವಕ್ಕೆ ಕಥೆ, ಕಥಾ ಟಿಪ್ಪಣಿ, ಸಂಭಾಷಣೆ ರಚಿಸುವಲ್ಲಿ ಯಶಸ್ವಿಯಾದರು.

ಅವರ ಅಪರಿಚಿತ, ಸಪ್ತಪದಿ, ಕರಿನಾಯಿ ಹಾಗೂ ನೆಲುವಿಗೆ ಹಾರದ ಬೆಕ್ಕು ಮುಂತಾದ ಕಥೆಗಳಿಗ ರಾಜ್ಯಮಟ್ಟದ ಬಹುಮಾನ ಬಂದಿವೆ. ಎರಡು ಬಾರಿ ರಾಜ್ಯ ಮಟ್ಟದ ಪತ್ತೇದಾರಿ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ ಅವರು ಯಶಸ್ವಿಯಾದರು. ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ ಎಂಬ ಅವರ ಸಂಶೋಧಕನಾತ್ಮಕ ಕೃತಿ ಒಂದು ಆಕರ ಗ್ರಂಥವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡವರು. ಇವರಿಗೆ ೧೯೯೧ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆಗಾಗಿ ೧೯೯೮ರಲ್ಲಿ ರಾಷ್ಟ್ರಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ದೊರೆಯಿತು.

ಧಾರವಾಡದ ಸಾರಸ್ವತಪುರ ಬಡಾವಣೆಯೊಂದಕ್ಕೆ ಸುದರ್ಶನ ದೇಸಾಯಿ ಕಾಲೊನಿ ಎಂದು ನಾಮಕರಣ ಮಾಡಲಾಗಿದೆ. ನಾಟಕಕ್ಕೆ ಮೀಸಲಾದ ರಂಗತೋರಣ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಹೊರತರುವ ಸಂದರ್ಭದಲ್ಲಿ ಪತ್ರಿಕೆಗೆ ನಾಟಕ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿ ಬಂತು. ನಟನಾ ಕೌಶಲ್ಯ್ವನ್ನು ಪಡೆದ ಸುದರ್ಶನ ದೇಸಾಯಿ ಸ್ವತಃ ವೃತ್ತಿ ನಾಟಕ ಕಂಪನಿ ಕಟ್ಟಿ ತಾವೇ ಸ್ವತಃ ನಾಯಕ, ಖಳನಾಯಕ, ಚಾರಿತ್ರಿಕ ಪಾತ್ರ ಹಾಗು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾದವರು. ಕನಿಷ್ಠ ೨೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ದೇಸಾಯಿಯವರು ನೋವು ನಲಿವನ್ನು ಅನುಭವಿಸಿದವರು. ಇವರು ೨೦೧೨ರಂದು ಇಹಲೋಕದ ಯಾತ್ರೆ ಮುಗಿಸಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಸ.ಜ. ನಾಗಲೋತಿಮಠ

ಡಾ| ಸ.ಜ. ನಾಗಲೋತಿಮಠ ಸಜ್ಜನ, ನಿರಾಡಂಬರದ ವ್ಯಕ್ತಿತ್ವವುಳ್ಳ ಶ್ರೇಷ್ಠ ವೈದ್ಯರಾಗಿದ್ದರು. ಹಣದ ಆಮಿಷಕ್ಕೆ ಒಳಗಾಗದೇ ತಮ್ಮ ವೃತ್ತಿಗೆ ಘನತೆ ತಂದುಕೊಟ್ಟ ವಿರಳರಲ್ಲಿ ವಿರಳರು. ಸರಸ್ರಾರು ವೈದ್ಯರನ್ನು ನಿರ್ಮಿಸಿದ ಖ್ಯಾತಿ ಈ ಹಿರಿಯ ಚೇತನಕ್ಕೆ ಸಲ್ಲುತ್ತದೆ.

ಡಾ| ಸದಾಶಿವಯ್ಯ ಜಂಬಯ್ಯ ನಾಗಲೋತಿಮಠ ನಡೆದು ಬಂದ ದಾರಿ ಹೂವಿನ ಹಾದಿಯಾಗಿರಲಿಲ್ಲ. ಅವರು ತಮ್ಮ ಸ್ತತ ಪರಿಶ್ರಮದಿಂದ ವೈದ್ಯಕೀಯ ಅಭ್ಯಾಸ ಮಾಡಿ ನಿಷ್ಠಾವಂತ ವೈದ್ಯರಾದರು. ಸಾಧನೆಯ ಹಿಂದಿರುವ ಪರಿಶ್ರಮ ಏಕೋಭಾವದಿಂದ ಸಾಧಿಸಬೇಕೆಂಬ ಛಲವಿದ್ದವರಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಜುಲೈ ೩೦,, ೧೯೪೦ರಲ್ಲಿ ಗದುಗಿನಲ್ಲಿ ನಾಗಲೋತಿಮಠ ಜನಿಸಿದರು. ಕಿತ್ತು ತಿನ್ನುವ ಬಡತನದಲ್ಲಿ ಇವರ ತಾಯಿ ಹಂಪವ್ವ ಮಗನನ್ನು ಸಾಕಿ ಬೆಳಸಿದರು. ನಂತರ ೧೯೬೫ರಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದುಕೊಂಡರು. ೧೯೭೦ರಲ್ಲಿ ಪೆಥಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಳಗಾವಿ ಜೆ.ಎನ್.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಪೆಥೋಲಾಜಿ ವಿಭಾಗಗಳ ಮುಖ್ಯಸ್ಥರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಜೊತೆಗೆ ಪೆಥೋಲಾಜಿ ಮ್ಯೂಜಿಯಂ ಸ್ಥಾಪಿಸಿದರು. ಇದರ ಪ್ರಭಾವ ಅವರಿವೆ ಡಾ ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.
ಇವರು ೧೯೮೦ರಲ್ಲಿ ಪೆಥೋಲಜಿ ಸಮ್ಮೇಳನವನ್ನು ನಭೂತೋ ನಭವಿಷ್ಯತಿ ಎಂಬಂತೆ ಏರ್ಪಡಿಸಿ ತಮ್ಮ ಕಾರ್ಯ ಸಾಮರ್ಥ್ಯವನ್ನು ತೋರ್ಪಡಿಸಿದರು. ಇಂಡಿಯನ್ ಜರ್ನಲ್ ಒಫ್ ಪೆಥೋಲಾಜಿ ಅಂಡ್ ಮೈಕ್ರೋಲಜಿ ಎಂಬ ಪತ್ರಿಕೆಯ ಸಂಪಾದಕರಾಗಿ ಉತ್ತಮವಾಗಿ ಕಾರ್ತ್ಯನಿರ್ವಹಿಸಿದರು. ಇವರ ಪರಿಣಿತಿ ಗಮನಿಸಿ ಇವರಿಗೆ ಮೆಡಿಕಲ್ ಕೌನ್ಸಿಲ್ಗೆ ಸದಸ್ಯರಾಗಲು ಅನುಮತಿ ದೊರೆಯಿತು.
ಅನ್ನ ಮಾರ್ಗದಲ್ಲಿ ಅಪಘಾತಗಳು ಎಂಬ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯಕ ಅಕಾಡೆಮಿ ಪ್ರಶಸ್ತಿ ಬಂದಿತು. ಬೆಳಗಾವಿಯಲ್ಲಿ ವಿಜ್ಞಾನ ಕೇಂದ್ರ ಆರಂಭಿಸಿದ ವರ್ಷವೇ ಹರಿ ಓಂ ಆಶ್ರಮ ರಿಸರ್ಚ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ೧೯೯೧ರಲ್ಲಿ ಬಿಜಾಪುರ ಕಾಲೇಜಿಗೆ ಪ್ರಿನ್ಸಿಪಾಲರಾಗಿ ನೇಮಕಗೊಂಡು ಅಲ್ಲಿ ಹೊಸತನ ತರುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ಸ್ಥಾಪಿಸಿದ ದೇಹದ ಹರಳು ಮ್ಯೂಸಿಯಂ ಈಗಳು ಜನರನ್ನು ಆಕರ್ಷಿಸುತ್ತದೆ. ೯೩-೯೮ರವರೆಗೆ ಕರ್ನಾಟಕ ವಿಜ್ಞಾನ ಪರಿಷತ್ನ ಅಧ್ಯಕ್ಷರಾಗಿ ಮಾದಿದ ಕಾರ್ಯ ನಿಜಕ್ಕೂ ಶ್ಲಾಘನೀಯವಗಿದೆ. ೧೯೯೪ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. ೯೬ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯ ಮೊದಲ ಡೈರಕ್ಟರ್ ಆಗಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದರು. ಜೀವನಾಡಿ ಎಂಬ ಆರೋಗ್ಯ ಮಾಸಿಕವನ್ನು ಪ್ರಾರಂಭಿಸಿ ಜನಸಾಮಾನ್ಯರಿಗೆ ಆರೋಗ್ಯಯುತ ಜೀವನ ಸಾಗಿಸಲು ತಿಳುವಳಿಕೆ ನೀಡತೊಡಗಿದರು.
ತಮ್ಮ ಜ್ಞಾನಧಾರೆಯನ್ನು ೧೪ ಆಂಗ್ಲ ಪುಸ್ತಕಗಳು, ೫೦ ಕನ್ನಡ ಪುಸ್ತಕಗಳು ಹಾಗೂ ೧೩೫ ಪ್ರಬಂಧಗಳನ್ನು ಬರೆಯುವ ಮೂಲಕ ನಾಡಿನ ಮನೆಮಾತಾದರು. ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ ಪಡೆದರು. ಇವರಿಗೆ ಸಂದ ಕೀರ್ತಿಯಿಂದ ಇವರು ಹಿಗ್ಗದೆ, ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಇನ್ನಷ್ಟೂ ತಮ್ಮ ಸೇವೆ ಸಲ್ಲಿಸಬೇಕೆಂಬ ತವಕ ಇವರದಾಗಿತ್ತು.
ಇವರು ೨೦೦೬ರಲ್ಲಿ ಇಹಲೋಕದ ಪ್ರಯಾಣ ಮುಗಿಸಿದರು. ಇವರ ಬಿಚ್ಚಿದ ಜೋಳಿಗೆ ಅತ್ಯಂತ ಮೌಲಿಕ ಆತ್ಮಚರಿತ್ರೆಯಾಗಿದೆ. ಅವರಿಗೆ ನೊಸಲಿನ ವಿಭೂತಿ ಶರಣ ಜೀವನದ ಸಂಕೇತವಿತ್ತು. ಶರಣರ ಜೀವನವನ್ನು ನಿಜ ಅರ್ಥದಲ್ಲಿ ಬದುಕಿದ ನಾಗಲೋತಿಮಠ ಇಂದು ಕಳೆದು ಹೋಗುತ್ತಿರುವ ಮೌಲ್ಯಗಳನ್ನು ಮತ್ತೆ ಮರುಪ್ರತಿಷ್ಠಾಪಿಸಬೇಕೆಂಬ ಸಂದೇಶ ನೀಡುವ ಚೇತನವಾಗಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಎಂ. ಎಂ. ಕಲಬುರ್ಗಿ

ಡಾ ಎಂ. ಎಂ. ಕಲಬುರ್ಗಿಯವರನ್ನು ವಿದ್ವಾಂಸರು ಸಮಗ್ರ ಸಂಶೋಧಕ ಎಂದು ಗುರುತಿಸುತ್ತಾರೆ. ಸಂಶೋಧನೆಗೆ ಅವಶ್ಯವಿರುವ ಆಕರ ಶೋಧ, ಶೋಧಿತ ಆಕರಗಳ ವಿಶ್ಲೇಷಣೆ, ವಿಶ್ಲೇಷಿತ ಆಕರಗಳ ವ್ಯಾಖ್ಯಾನ – ಈ ಮೂರು ಹಂತಗಳಲ್ಲಿ ಅವರು ದುಡಿದುದೇ ಈ ಗುರುತಿಸುವಿಕೆಗೆ ಕಾರಣ. ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗಪಡಿಸಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ ಎಂಬ ಧ್ಯೇಯಕ್ಕೆ ಬದ್ಧರಾಗಿ ಇವರು ತಮ್ಮ ಬರವಣಿಗೆಯನ್ನು ವರ್ತಮಾನಕ್ಕೆ ಅನ್ವಯಿಸುತ್ತ ಬಂದುದೂ ಇನ್ನೊಂದು ಕಾರಣವಾಗಿದೆ. ಇವರು ವಿಶ್ಲೇಷಣೆಯ ಮೂಲಕ ಗತಕಾಲದ ಕಾರ್ಯಶೋಧವನ್ನು ವ್ಯಾಖ್ಯಾನದ ಮೂಲಕ ಕಾರ್ಯಶೋಧದ ಹಿಂದಿನ ಕಾರಣಶೋಧವನ್ನು ಮತ್ತು ಮುಂದಿನ ಪರಿಣಾಮಶೋಧಗಳನ್ನು ಪೂರೈಸುವ ಕಾರಣದಿಂದಲೂ ಸಮಗ್ರ ಸಂಶೋಧಕರೆನಿಸಿದ್ದಾರೆ.

ಸಂಶೋಧಕರಾಗಿರುವಂತೆಯೇ ಸೃಜನಶೀಲ ನೆಲೆಯಲ್ಲಿಯೂ ತಮ್ಮನ್ನು ಗುರುತಿಸಿಕೊಂಡ ಅವರು, ತಮ್ಮ ಪಾಂಡಿತ್ಯ, ಸತತ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ನಾಡಿನ ವಿದ್ವಜ್ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ ಹಾಗೂ ವಚನ ಸಾಹಿತ್ಯಗಳ ಬಗೆಗಿನ ಅವರ ಸ್ಮರಣಶಕ್ತಿ ಮತ್ತು ವಿದ್ವತ್ತುಗಳು ಸದಾಕಾಲಕ್ಕೂ ಬೆರಗು ಹುಟ್ಟಿಸುವಂಥವು.

ಬಿಸಿಲು ನಾಡಿನ ವಿಜಾಪುರ ಜಿಲ್ಲೆಯಿಂದ ಬಂದವ ಇವರು ಸಿಂದಗಿ ತಾಲೂಕಿನ ಶ್ರಮಸಂಸ್ಕೃತಿಯ ಮಡಿವಾಳಪ್ಪ ಮತ್ತು ಗುರಮ್ಮ ದಂಪತಿಗಳ ಮೂರನೆ ಮಗನಾಗಿ ೧೯೩೮ರಲ್ಲಿ ಜನಿಸಿದರು. ಅವರು ೧೯೬೮ರಲ್ಲಿ ಕವಿರಾಜ ಮಾಗ್ರ ಪರಿಸರದ ಕನ್ನಡ ಸಾಹಿತ್ಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದರು. ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರವಾಚಕರಾಗಿ ಪ್ರಾಧ್ಯಾಪಕರಾಗಿ ೧೯೮೩ರವರೆಗೆ ಸೇವೆಯನ್ನು ಸಲ್ಲಿಸಿದರು. ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಂಘದ ಮೂಲಕ ವಿದ್ಯಾರ್ಥಿ ಭಾರತಿ ಪತ್ರಿಕೆಯನ್ನು ಆರಂಭಿಸಿದರು. ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, ಸಂಸ್ಕೃತಿ ಸಮ್ಮೇಳನಗಳು ಇವರ ಕನಸಿನ ಸೃಷ್ಟಿಗಳಾಗಿವೆ. ೧೯೮೨ರಲ್ಲಿ ೪೦ ದಿನಗಳ ಕಾಲ ಇಂಗ್ಲೆಂಡ್ ಕೇಂಬ್ರಿಜ್ ಆಕ್ಸ್ಫರ್ಡ್ ಗಳಿಗೆ ಭೇಟಿ ನೀಡಿ ಕನ್ನಡ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ೧೯೮೦ರಿಂದ ೮ ವರ್ಷಗಳ ಕಾಲ ಬಸವೇಶ್ವರ ಪೀಠದ ಪ್ರಾಧ್ಯಾಪಕರಾಗಿ ಶರಣ ಸಾಹಿತ್ಯದ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಉತ್ತೇಜನ ನೀಡಿದರು. ಇವೆಲ್ಲವುಗಳಿಗೆ ಕಳಸವಿಟ್ಟಂತೆ ೧೯೯೮ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಕನ್ನಡದ ರಥವನ್ನು ಎಳೆಯುವಲ್ಲಿ ಕೈಕೂಡಿಸಿದರು. ಈ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಪ್ರಕಟಣೆಗಳು ವೇಗವನ್ನು ಪಡೆದುಕೊಂಡಾವು. ಹಸ್ತಪ್ರತಿ ವಿಭಾಗದಲ್ಲಿ ಹಸ್ತಪ್ರತಿ ಗ್ರಂಥಾಲಯವನ್ನು ಅಸ್ತಿತ್ವಕ್ಕೆ ತಂದು, ಪ್ರಾಚೀನ ಕೃತಿಗಳ ಸಂಪಾದನೆ, ಹಸ್ತಪ್ರತಿ ಸೂಚಿಗಳ ಪ್ರಕಟಣೆಗೆ ಪ್ರೇರಕರಾದರು. ಗ್ರಾಮ ಚರಿತ್ರೆ ಕೋಶಗಳ ನಿರ್ಮಾಣದ ಕನಸನ್ನು ಕಂಡು ಅದು ಜಾನಪದ ವಿಶ್ವವಿದ್ಯಾಲಯದಲ್ಲಿ ಒಂದು ಯೋಜನೆಯಾಗಿ ಮುಂದುವರಿಯಲು ಕಾರಣರಾದರು.

ಕವನ, ನಾಟಕ, ಪ್ರಬಂಧ ಇತ್ಯಾದಿ ಸೃಜನಶೀಲ ಸಾಹಿತ್ಯದೊಂದಿಗೆ ಬೃಹತ್ತಾದ ಮತ್ತು ಮಹತ್ತಾದ ಸಂಶೋಧನಾ ಸಾಹಿತ್ಯವನ್ನು ೫೦ ವರ್ಷಗಳಲ್ಲಿ ೧೦೭ ಕೃತಿಗಳನ್ನು ಪ್ರಕಟಿಸಿದರು. ಬಹಳಷ್ಟು ವಿಷಯಗಳ ಕೃತಿರಚನೆಯಲ್ಲಿ ಇವರು ಮೊದಲಿಗರು. ಬಸವಣ್ಣನವರನ್ನು ಕುರಿತು ಶಾಸನ್ಗಳು, ಇವರ ಮೊಟ್ಟಮೊದಲ ಕೃತಿಯಾಗಿದೆ. ತದನಂತರ ಧಾರವಾಡ ಜಿಲ್ಲೆಯ ಶಾಸನ ಸೂಚಿ, ವಿಜಾಪುರ ಜಿಲ್ಲೆಯ ಶಾಸನ ಸೂಚಿಗಳನ್ನು ಸಂಪಾದಿಸಿದರು. ಅವರ ಮಹತ್ವದ ಸಂಪಾದಿತ ಕೃತಿಗಳೆಂದರೆ ಬಸವಣ್ನನವರ ಟೀಕಿನ ವಚನಗಳು, ಕರ್ನಾಟಕದ ಕೈಫಿಯತ್ತುಗಳು, ಹರಿಹರನ ರಗಳೆಗಳು, ಕನ್ನಡ ಶರಣರ ಕಥೆಗಳು, ಕಿತ್ತೂರು ಸಂಸ್ಥಾನ ಸಾಹಿತ್ಯ ಇತ್ಯಾದಿ.
ವ್ಯಕ್ತಿಗಳು ಮತ್ತು ಅವರ ಸಾಧನೆಗಳ ಕುರಿತಾಗಿ ಕಲಬುರ್ಗಿಯವರ ಆಸಕ್ತಿ ಅಪಾರ. ಆ ಕಾರಣ ದಿಂದಾಗಿಯೇ ಅರಟಾಳ ರುದ್ರಗೌಡರ ಚರಿತ್ರೆ, ಮಡಿವಾಳಪ್ಪ ಸಾಸನೂರ, ಗುರುಗಳಾದ ಬಿ.ಟಿ. ಸಾಸನೂರ ಅವರ ಕುರಿತಾಗಿ ವಜ್ರ ಕುಸುಮ, ಹರ್ಡೇಕರ್ ಮಂಜಪ್ಪನವರ ಕುರಿತು ೨ ಸಂಪುಟಗಳನ್ನು ಹೊರತರಲು ಕಾರಣರಾಗಿದ್ದಾರೆ. ಲಿಂಗಾಯತ ಅರಸು ಮನೆತನಗಳ ಕುರಿತು ವಿಆರ ಸಂಕಿರಣಗಳನ್ನು ಏರ್ಪಡಿಸಿ, ಸಾರಂಗಶ್ರೀ, ಸ್ವಾದಿ ಅರಸು ಮನೆತನ, ಬೀಳಗಿ ಅರಸು ಮನೆತನ, ಕೆಳದಿ ಸಂಸ್ಥಾನದ ಬಗ್ಗೆ ಅಧ್ಯಯನಗಳನ್ನು ಸಂಪಾದಿಸಿದಾರೆ.

ಡಾ ಕಲಬುರ್ಗಿಯವರು ದೊಡ್ಡ ಸಂಶೋಧಕರಾಗಿರುವಂತೆ ದೊಡ್ಡ ಯೋಜಕರೂ ಹೌದು. ಇದಕ್ಕೆ ನಿದರ್ಶನವೆಂಬಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪ್ರಿಯ ವಚನ ಸಂಪುಟ ಯೋಜನೆ, ಬಸವ ಸಮಿತಿಯಿಂದ ೨೨ ಭಾಷೆಗಳಿಗೆ ವಚನ ಅನುವಾದ ಯೋಜನೆ, ಪತ್ರಾಗಾರ ಇಲಾಖೆಯಿಂದ ಪ್ರಾಚೀನ ಅಪ್ರಕಟಿತ ಸಾಹಿತ್ಯ ಪ್ರಕಟಣೆ, ಹಂಪಿ ವಿಶ್ವವಿದ್ಯಾಲಯದಿಂದ ಕೊಡೇಕಲ್ಲ ಸಂಪ್ರದಾಯ ಸಾಹಿತ್ಯ ಪ್ರಕಟಣೆ ಮುಂತಾದವು.

ಇವರಿಗೆ ಹಲವಾರು ಪುರಸ್ಕಾರಗಳು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೫ ಬಾರಿ ಪುಸ್ತಕ ಬಹುಮಾನ, ಮತ್ತು ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಬಿರುದು ಮುಂತಾದವು.

ಕಲಬುರ್ಗಿಯವರ ಭಾಷೆ ಸೃಜನಶೀಲ ಸಂಶೋಧನೆಗೆ ಅನುರುಪವಾದುದು. ಸಂಶೋಧನೆ ಎನ್ನುವುದು ಅಲ್ಪ ವಿರಾಮ, ಅರ್ಧ ವಿರಾಮಗಲ ಮೂಲಕ ಪೂರ್ಣ ವಿರಾಮಕ್ಕೆ ಸಾಗುವ ಕ್ರಿಯೆ, ಸಂಶೋಧಕ ತಪ್ಪು ಹೇಳಿರಬಹುದು, ಸುಳ್ಳು ಹೇಳಿರಲಾರ ಇತ್ಯಾದಿ ಸಾರ್ವಕಾಲಿಕ ಮಾತುಗಳನ್ನು ಅವರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅವರೇ ಹೇಳಿಕೊಳ್ಳುವಂತೆ ಅವರ ಮೊದಲ ಪ್ರೀತಿ ವಿದ್ಯಾರ್ಥಿಗಳು, ಎರಡನೆಯ ಪ್ರೀತಿ ಪುಸ್ತಕಗಳು, ಮೂರನೆಯ ಪ್ರೀತಿ ಹೆಂಡತಿ. ಅವರು ಕೇವಲ ವ್ಯಕ್ತಿಯಾಗದೆ ಶಕ್ತಿಯೂ ಹೌದು, ೨೦೧೫ರ ಆಗಸ್ಟ ೨೦ರಂದು ಹಂತಕರ ಗುಂಡಿಗೆ ಬಲಿಯಾದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಗಿರಡ್ಡಿ ಗೋವಿಂದರಾಜ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕರಾಗಿ, ಕಥೆಗಾರಗಾಗಿ, ಜನಪ್ರಿಯರಾದ ಡಾ| ಗಿರಡ್ಡಿ ಗೋವಿಂದರಾಜರು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸಾಧನೆ ಮಾಡುತ್ತಿದ್ದಾರೆ. ಕನ್ನಡ ನವ್ಯ ವಿಮರ್ಶೆಗೆ ಭದ್ರವಾದ ನೆಲೆ ಒದಗಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೩೯ರಲ್ಲಿ ಇವರ ಜನನವಾಯಿತು. ನರೇಗಲ್ಲ, ರೋಣಗಳಲ್ಲಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜು ಸೇರಿದ್ದು ಇವರ ಜೀವನದ ಮಹತ್ವದ ಮೈಲಿಗಲ್ಲು. ಧಾರವಾಡದ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣದಿಂದ ಪ್ರಭಾವಿತರಾದ ಗಿರಡ್ಡಿರವರು ಅಲ್ಲಿದ್ದ ಪ್ರಮುಖ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಬಿ.ಎ, ಎಂ.ಎ ಪದವಿ ಪಡೆದು, ಹನುಮನಮಟ್ಟಿಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ, ಮತ್ತೆ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾದರು. ಇವರು ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೂವರು ಸೇರಿ ಸಂಕ್ರಮಣ ಪತ್ರಿಕೆ ಆರಂಭಿಸಿದ್ದು ಸಂಕ್ರಮಣದಲ್ಲಿ ಗಿರಡ್ಡಿಯವರು ವಿಮರ್ಶಾ ಲೇಖನ ಪ್ರಕಟಿಸಿದ್ದು, ಪತ್ರಿಕೆಯ ಉತ್ಕರ್ಷಕ್ಕೆ ದುಡಿದದ್ದು ಈಗ ಇತಿಹಾಸ.
ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದಲ್ಲಿ ೧೪ ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಣಾನ ಅಧ್ಯಯನವನ್ನು ಒಂದು ವರ್ಷ ಪೂರೈಸಿದರು. ಅವರು ಭಾಷಾವಿಜ್ಞಾನದಲ್ಲಿ ಮಹಾಪ್ರಬಂಧ ರೈಸಿ ಪಿ.ಎಚ್.ಡಿ. ಪದವಿ ಪಡೆದರು.
ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದರೂ ಡಾ| ಗಿರಡ್ಡಿ ಗೋವಿಂದರಾಜರ ಪ್ರಧಾನ ಆಸಕ್ತಿ ಕನ್ನಡ ಸಾಹಿತ್ಯದಲ್ಲಿ. ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯದ ಅಭಿರುಚಿ, ಆಸ್ಥೆ ಹೊಂದಿದ ಗಿರಡ್ಡಿಯವರು ಶಾರದಾ ಲಹರಿ ಕವಿತಾ ಸಂಕಲನ ಹೊರತಂದರು. ಅವರ ಕವನಗಳಲ್ಲಿ ಸಹಜ ಲಲಿತವಾದ ಓಟವಿದೆ, ಛಂದೋಗತಿಗೆ ಕುಂದಿಲ್ಲ, ಅವರ ಬರವಣಿಗೆಯಲ್ಲಿ ಒಂದು ನಿರರ್ಗಳತೆಯಿದೆ ಎಂದು ಗೋಕಾಕರು ಅಭಿಪ್ರಾಯಪಟ್ಟಿದ್ದರು.
ಗಿರಡ್ಡಿ ಗೋವಿಂದರಾಜರಿಗೆ ಕನ್ನಡ ಸಣ್ಣಕಥೆಯ ಬೆಳವಣಿಗೆಯಲ್ಲಿ ಅಪಾರವಾದ ಆಸ್ಥೆ. ತಮ್ಮ ಸೃಜನಶೀಲತೆಯನ್ನು ಸಣ್ಣಕಥೆಯ ವ್ಯ್ವಸಾಯದಲ್ಲಿ ಪ್ರಕಟಿಸಿದ ಗಿರಡ್ಡಿಯವರು ಮಹತ್ವದ ಕಥೆಯ್ಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಆ ಮುಖಾ ಈ ಮುಖಾ,ಹಂಗು ಮತ್ತು ಇತರ ಕಥೆಯ್ಗಳು, ಬಂದು ಬೇವಿನ ಮರದ ಕಥೆಯ ಮೊದಲಾದ ಸತ್ವಯುತವಾದ ಕಥೆಯ್ಗಳನ್ನು ರಚಿಸಿದ್ದಾರೆ. ಅವರ ಮರೆಯಲಾರದ ಹಳೆಯ ಕಥೆಗಳು, ಮರೆಯಲಾರದ ಕಥೆಗಾರರ ಕಥೆಗಳ ಸಂಪುಟವನ್ನು ಗಿರಡ್ಡಿಯವರು ಸಿದ್ಧಪಡಿಸಿ ಅವರ ಕಥೆಗಳ ಕುರಿತಾದ ವಿಮರ್ಶೆಯನ್ನೂ ಮೊದಲ ಬಾರಿಗೆ ನೀಡಿದಾರೆ.
ಗಿರಡ್ಡಿಯವರು ವಿಮರ್ಶೆಗೆ ನೀಡಿರುವ ಕೊಡುಗೆ ಅಮೂಲ್ಯವಾದುದು. ಅವರು ನವ್ಯ ವಿಮರ್ಶೆ ಯ ಸ್ವರೂಪವನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ. ಜಾನಪದ ಕಾವ್ಯದ ವಿಮರ್ಶೆಯನ್ನು ಹೊಸ ಆಯಾಮಕ್ಕೆ ಗಿರಡಿಯವರ ಜನಪದ ಕಾವ್ಯದಲ್ಲಿ ಮೌಲ್ಯಪ್ರಜ್ಞೆ ಮಹತ್ವದ ಆಶಯವನ್ನು ಪ್ರಕಟಿಸುತ್ತದೆ. ಇವರ ಸಾತತ್ಯ ಮಹತ್ವದ ಆಶಯದ ೧೪ ವಿಮರ್ಶಾ ಲೇಖನಗಳ ಸಂಪುತಾವಾಗಿದೆ. ಇವರ ಕನ್ನಡ ಡೈಗ್ಲಾಸಿಯಾ ಗಮನಾರ್ಹವಾದ ಪುಸ್ತಕವಾಗಿದೆ. ಗಿರಡ್ಡಿಯವರು ಸಂಪಾದಿಸಿದ ಸಣ್ಣಕಥೆ, ಕನ್ನಡ ಕಥಾ ಸಂಕಲನ, ಸಂಕ್ರಮಣ, ಕಾವ್ಯ, ಹವ್ಯಾಸಿ ರಂಗಭೂಮಿಯ ಸಮಸೆಯ್ಗಳು ಹೀಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ.
ಇವರ ನವ್ಯವಿಮರ್ಶೆ ಗ್ರಂಥಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಾತತ್ಯ ಕೃತಿಗೆ ಸ ಸ ಮಾಳವಾಡ ಪ್ರಶಸ್ತಿ ಸಂದಿವೆ. ಇವರು ಕನ್ನಡದ ಹೊಸ ಸಂವೇದನೆಯ ನಾಟಕಗಳು ರಂಗಭೂಮಿಯಲ್ಲಿ ಪ್ರಯೋಗವಾಗುವಂತೆ ಶ್ರಮಿಸಿದ್ದಾರೆ.
ಇವರ ಲಲಿತ ಪ್ರಬಂಧಗಳ ಸಂಕಲನ ಹಿಡಿಯದ ಹಾದಿ ಅವರ ಪ್ರಬುದ್ಧವಾದ ಚಿಂತನಶೀಲತೆ, ರಸಿಕತೆಯ ಪ್ರತೀಕವಾಗಿದೆ. ಹೊರನೋಟದಲಿ ಗಂಭೀರವಾಗಿ ಕಾಣುವ ಗಿರಡ್ಡಿಯವರಲ್ಲಿ ಹಾಸ್ಯ ಹಾಸು ಹೊಕ್ಕಾಗಿದೆ. ಇವರು ಸಾಹಿತ್ಯ ಸಂಪಾದನೆಯಲ್ಲಿ ಶ್ರಮಿಸಿದವರು. ಸಾಹಿತ್ಯ ಅಕಾಡೆಮಿಯ ಪಾರಿಭಾಷಿಕ ಮಾಲೆಯ ಸಂಪಾದಕರಾಗಿ ೨೪ ಕೃತಿಗಳನ್ನೂ ಶತಮಾನದ ಸಾಹಿತ್ಯದ ಆರು ಸಂಪುಟಗಳನ್ನು ಸಂಪಾದಿಸಿದ್ದಾರೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ನಾ ಡಿಸೋಜ

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರಲ್ಲಿ ಜನಿಸಿರುವ ಡಿಸೋಜಾರವರ ಹೆಸರು ನಾಬರ್ಟ್. ಅವರ ತಂದೆ ಡಿಸೋಜ ಪ್ರಾಥಮಿಕ ಶಾಲಾ ಮುಖೋಪಾಧ್ಯಾಯರಾಗಿದ್ದರು. ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪದ್ಯಗಳನ್ನು ಕಲಿಯುವುದರ ಮೂಲಕ ಇಅರ ಸಾಹಿತ್ಯಾಸಕ್ತಿ ಮೊಳೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು ಕತೆಗಳು ಇವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದವು.

ಮಾಸ್ತಿ, ಕುವೆಂಪು, ಗೋಕಾಕ್, ಕಾರಂತ, ಗೋರೂರರ ಪುಸ್ತಕಗಳ ಜೊತೆ, ಡಿಕನ್ಸ್, ಸಾಮರ್ ಸೆಟ್, ಪರ್ಲ್ ಬಕ್ ಮುಂತಾದವರ ಪುಸ್ತಕಗಳನ್ನು ಓದುತ್ತಿದ್ದರು. ಮೊದಲು ಪ್ರಪಂಚ ಪತ್ರಿಕೆಗೆ ಕತೆಗಳನ್ನು ಬರೆಯತೊಡಗಿದರು. ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವೀತೀಯ ದರ್ಜೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ನಂತರ ಬಡ್ತಿ ಹೊಂದಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ ಮುಂತಾದೆಡೆಗಳಲ್ಲಿ ೩೭ ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದರು.

೧೯೬೪ರಲ್ಲಿ ಇವರ ಮೊದಲ ಕಾದಂಬರಿ ಬಂಜೆ ಬೆಂಕಿ ಪ್ರಕಟವಾಯಿತು. ನಂತರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಮಾನವ, ಕಾಡಿನ ಬೆಂಕಿ, ಹೀಗೆ ಸುಮಾರು ೪೦ ಕಾದಂಬರಿಗಲನ್ನು ಬರೆದಿದ್ದಾರೆ. ಇದಲ್ಲದೆ ಸಣ್ಣ ಕತೆಗಳನ್ನು, ನಾಟಕಗಳನ್ನು ಮತ್ತು ಮಕ್ಕಳ ಸಾಹಿತ್ಯವನ್ನೂ ರಚಿಸಿದ್ದಾರೆ. ಅವರ ಪ್ರಕಟಿತ ಗ್ರಂಥಗಳ ಸಂಖ್ಯೆ ಸುಮಾರು ೯೪ನ್ನು ದಾಟುತ್ತದೆ. ಇವರ ಮುಳುಗಡೆಯ ಊರಿಗೆ ಬಂದವರು ಎಂಬ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ.

ಮೂರು ದಶಕಗಳಿಂದ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಇವರ ಕಾದಂಬರಿಗಳಲ್ಲಿ ಪರಿಸರ ನಾಶ, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹಾಗೂ ಕ್ರೈಸ್ತ ಜನಾಂಗದ ಬದುಕಿನ ದಟ್ಟ ಅನುಭವಗಳು ಓದುಗರ ಮನಸೂರೆಗೊಂಡಿವೆ. ಸುರೇಶ ಹೆಬ್ಳೀಕರ ನಿರ್ದೇಶನದಲ್ಲಿ ಕಾಡಿನ ಬೆಂಕಿ ಎಂಬ ಕೃತಿ ಸಿನಿಮಾ ಆಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ದ್ವೀಪ ಎಂಬ ಕೃತ್ ಕೂಡ ಸಿನಿಮಾ ಆಗಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ೨೦೧೮ರಲ್ಲಿ ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ