ಡಾ| ಹಂಪ ನಾಗರಾಜಯ್ಯ

ಕನ್ನಡ ಸಾಹಿತ್ಯಲೋಕಕ್ಕೆ ಹಂಪನಾ ಎಂದೇ ಚಿರಪರಿಚಿತರಾಗಿರುವ ಹಂಪ ನಾಗರಾಜಯ್ಯ ವರು ಕೋಲಾರ ಜೆಲ್ಲೆ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ೧೯೩೬, ಅಕ್ಟೋಬರ್ ೭ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದು ೫೯ ರಿಂದ ೯೬ ರವರೆಗೆ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಶ್ರೇಷ್ಠ ಪ್ರಾಧ್ಯಾಪಕರೆಂದು ಹೆಸರು ಗಳಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದವರು.

ಅಪಾರ ಪ್ರಮಾಣದ ಸಂಶೋಧನ ಅನುಭವ ಹೊಂದಿರುವ ಹಂಪನಾ ಅವರು ಅನೇಕ ಪಿ.ಎಚ್.ಡಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ೮೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಲ್ಲದೇ ೧೦೦ಕ್ಕೂ ಅಧಿಕ ಸಂಶೋಧನ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಖ್ಯಾತಿಯ ಇವರು ವಿದೇಶದ ಹಲವಾರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಪ್ರಬಂಧ ಮಂಡಿಸಿ ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ನಾಡಿನ ಸಂಸ್ಕೃತಿಯನ್ನು ಪ್ರಚಾರ ಮಾಡಿದ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸಿ, ಸಾಹಿತ್ಯ ಪರಿಷತ್ತಿನ ಕಾರ್ಯವೈಕಹ್ರಿಯನ್ನು ಗ್ರಾಮೀಣ ಮಟ್ಟಕ್ಕೂ ಪಸರಸಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದ್ದಾರೆ. ಕುವೆಂಪು ಸಾಹಿತ್ಯದ ಸಂಸ್ಥಾಪಕ ಸದಸ್ಯ ಮತ್ತು ಅಧ್ಯಕ್ಷರಾಗಿ ಕುವೆಂಪು ಸಾಹಿತ್ಯವನ್ನು ಜನತೆಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಬೆಂಗಳೂರು ಜೈನ ಸಂಶೋಧನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹೀಗೆ ಹಲವಾರು ವಿಭಾಗಗಳಲ್ಲಿ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.

ಜೀವನ ಮಾಸಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಾಧನೆ, ಜಿನಮಂಜರಿ ಮೊದಲಾದ ಪತ್ರಿಕೆಗಳ ಸಂಪಾಕದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಬೇರೆ ಬೇರೆ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಸಮ್ಮೇಳನಗಳಿಗೆ ಸೂಕ್ತ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬೆಳ್ಳಿ ಬಿಟ್ಟ ಬಳ್ಳಿ ಮಾಲೆಯ ಮುಖಾಂತರ ೧೦೧ ಹಾಗೂ ಮಕ್ಕಳ ಪುಸ್ತಕ ಮಾಲೆಯ ೨೦೦ ಪುಸ್ತಕಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಭಾಷಾವಿಜ್ಞಾನ, ಗ್ರಂಥಸಂಪಾದನೆ, ಕಾದಂಬರಿ, ಪ್ರಬಂಧ ಸಂಕಲನ, ಜೀವನ ಚರಿತ್ರೆ, ವಿಮರ್ಶೆ, ಸಂಶೋಧನೆ, ಜಾನಪದ, ಪ್ರಚಾರೋಪನ್ಯಾಸಮಾಲೆ, ಅನುವಾದ, ಶಿಶುಸಾಹಿತ್ಯ, ಸಾಹಿತ್ಯಚರಿತ್ರೆ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಂಪನಾ ಅವರು ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲೀಷಿನಲ್ಲಿ ರಚಿಸಿ ಪ್ರಕಟಿಸಿದ್ದಾರೆ. ಪಚ್ಚೆ ತೆನೆ, ಸಂಕೃತಿ, ಸಂರಕ್ಷಣ, ಬರಹ ಬಾಗಿನ, ಹಂಗ್ರಂಥಾವಳಿ ಇವು ಅಭಿಮಾನಿಗಳಿಂದ ಹಂಪನಾ ಅವರಿಗೆ ಅರ್ಪಿಸಿದ ಸಂಭಾವನ ಕೃತಿಗಳು.

ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ಚುಂಚುಶ್ರೀ, ಪಂಡಿತರತ್ನ, ಶಂ.ಬಾ. ಜೋಶಿ ಪ್ರಶಸ್ತಿ, ಮಧ್ಯಪ್ರದೇಶದ ಆಆರ್ಯ ಸುಮತಿಸಾಗರಜಿ ಪುರಸ್ಕಾರ ಹೀಗೆ ಹಲವಾರು ಪುರಸ್ಕಾರಗಳು ಇವರ ಮುಡಿಯನ್ನು ಅಲಂಕರಿಸಿವೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಪಿ. ಲಂಕೇಶ್

ನವ್ಯ ಸಾಹಿತ್ಯದ ಪ್ರಮುಖ ಕವಿ, ಕಥೆಗಾರ, ಕಾದಂಬರಿಕಾರ ವಿಮರ್ಶಕ ಹಾಗೂ ಪತ್ರಿಕೋದ್ಯಮಿಯಾಗಿ ಪ್ರಸಿದ್ಧಿ ಪಡೆದಿರುವ ಪಿ. ಲಂಕೇಶರು ೧೯೩೫ರಲ್ಲಿ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಇವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾವ್ಯ ಸಂಕಲನಗಳು: ತಲೆಮಾರು, ಬಿಚ್ಚು. ಕಾದಂಬರಿಗಳು: ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ. ಕಥಾಸಂಕಲನಗಳು: ನಾನಲ್ಲ, ಕೆರೆಯ ನೀರು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಕಲ್ಲು ಕರ್ಗುವ ಸಮಯ ಮತ್ತು ಇತರ ಕಥೆಗಳು. ಚಲನಚಿತ್ರ ನಿರ್ದೇಶನ: ಪಲ್ಲವಿ, ಅನುರೂಪ, ಮುಂತಾದವು. ನಟರಾಗಿ, ಪ್ರಕಾಶಕರಾಗಿ, ಮುದ್ರಕರಾಗಿ, ಸಾಹಿತ್ಯದ ಎಲ್ಲಾ ರಂಗದಲ್ಲಿ ಆಳವಾಗಿ ಇಳಿದ ಒಂದು ಕಾಲಮಾನದ ಮಹತ್ವದ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವ ಲಂಕೇಶ್ ೨೦೦೦ರಲ್ಲಿ ಇಹಲೋಕ ತ್ಯಜಿಸಿದರು.

ಎರಡು ದಶಕಗಳ ಕಾಲ ಕನ್ನಡ ನಾಡಿನ ಮನಃಸ್ಥಿತಿಯನ್ನು ಜಾಗೃತವಾಗಿಡುವಷ್ಟು ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರು. ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ ಅನೂಹ್ಯವಾದ ಪ್ರಭಾವವನ್ನು ಹೋಮ್ದಿರಬಲ್ಲದು ಎನ್ನುವುದು ಲಂಕೇಶ ಅರಿತಿದ್ದರೋ ಇಲ್ಲವೋ ತಿಳಿಯದು. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ಹಾಗಿರದಿದ್ದರೆ ಹುಳಿ ಮಾವಿನ ಮರ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ.

ತಮ್ಮ ಮಗ ಇಂದ್ರಜಿತ್ ಹಿಂದೊಮ್ಮೆ ಬೆಂಗಳೂರಿನಲ್ಲಿ ಒಂದು ಸಣ್ಣ ಅಪಘಾತದಲ್ಲಿ ಸಿಲುಕಿ ಲಂಕೇಶರ ಹೆಸರು ಬಳಸಿ ಪಾರಾಗಿ ಬಂದಾಗ ಲಂಕೇಶರು ಇನ್ನೊಮ್ಮೆ ಇಂಥಾ ಕೆಲಸ ಮಾಡಿ ನನ್ನ ಹೆಸರನ್ನು ಎಲ್ಲೂ ಬಳಸತಕ್ಕದ್ದಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದರು. ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯಿತಿ ಪಡೇದವರಲ್ಲ. ಅತ್ಯಂತ ತತ್ವನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಅವರು ಪತ್ರಿಕೆಯನ್ನು ನಡೆಸಿದ್ದರು. ಅದು ಕೇವಲ ಪತ್ರಿಕೆಯಾಗಿರದೆ, ನಾಡಿನ ಪ್ರಜ್ಞಾವಂತ ಮನಸ್ಸುಗಳ ಮೂರ್ತ ರೂಪವಾಗಿತ್ತು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡ ಲಂಕೆಷ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು.

ಲಂಕೇಶ್ ಮೂಲತಃ ಅಧ್ಯಾಪಕರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಲಂಕೇಶರಂತಹ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ. ಯಾವುದನ್ನೆ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ. ಬೋದಿಲೇರನಂಥ ಫ್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲಗಳಲ್ಲಿ ಕಾದು ನಿಂತು, ಖರೀದಿಸಿ ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ. ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಲೇಖಕರನ್ನೂ ಬೆಳಸಿದರು. ಮಾನವ ಸಹದ ದೌರ್ಬಲ್ಯಗಳು ಅವರಲ್ಲಿದ್ದವು. ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಅನುಪಮಾ ನಿರಂಜನ

ಅನುಪಮಾ ನಿರಂಜನ ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತೆಯಲ್ಲಿ ಎರಡನೆಯ ಘಟ್ಟದ ತಲೆಮಾರಿನ ಲೇಖಕಿಯರಲ್ಲಿ ತಮ್ಮ ಬದುಕು ಬರಹಗಳಿಂದ ವಿಶಿಷ್ಠ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಪ್ರಥಮ ಕಥಾಸಂಕಲನ ಕಣ್ಮಣಿ ೧೯೫೨ರಲ್ಲಿ ಪ್ರಕಟಗೊಂಡಿತು. ನವ್ಯತೆಯ ಸುಳುಹುಗಳು ಕಾಣಿಸುತ್ತಿದ್ದ ಸಂದರ್ಭದಲ್ಲಿ ಅನುಪಮಾ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು.

ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದೇ ಅಪರೂಪವಾಗಿದ್ದ ಕಾಲದಲ್ಲಿ ಅನುಪಮಾ ವೈದ್ಯ ಪದವಿಯನ್ನು ಅಲಂಕರಿಸಿದ್ದರು. ಪ್ರಗತಿಶೀಲ ಕಾದಂಬರಿಕಾರ ನಿರಂಜನರ ವಿಚಾರ ಹಾಗೂ ವ್ಯಕ್ತಿತ್ವದಿಂದ ಪ್ರಹಾವಿತರಾಗಿ ಅವರನ್ನು ಪ್ರೀತಿಸಿ ಅಂತರ್ಜಾತೀಯ ವಿವಾಹವಾಗಿ ಸಮಾಜದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮನ್ವಯ ಸಾಧಿಸಿದರು. ವೈದ್ಯಕೀಯ ಸಾಹಿತ್ಯವನ್ನು ಕನ್ನಡಿಗರಿಗೆ ಕೊಟ್ಟ ಅಪರೂಪದ ಲೇಖಕಿ.

ಇವರ ಮೊದಲ ಹೆಸರು ವೆಂಕಟಲಕ್ಷ್ಮಿ. ತೀರ್ಥಹಳ್ಳಿಯಲ್ಲಿ ೧೭ ಮೇ ೧೯೩೪ ರಂದು ಜನಿಸಿದರು. ತಮ್ಮ ದೊಡ್ಡಪ್ಪ ಕೊಂಗಾದಿಯಪ್ಪನವರ ಮೇಜಿನ ಮೇಲಿದ್ದ ದಪ್ಪ ದಪ್ಪ ಪುಸ್ತಕಗಳನ್ನಿಟ್ಟುಕೊಂಡು ಬರೆಯುತ್ತಿದ್ದುದನ್ನು ನೋಡಿದ ಬಾಲಕಿ ಅನುಪಮಾಗೆ ತಾವು ಹಾಗೆ ಬರೆಯಬೇಕೆಂಬ ಬಯಕೆ ಅಂಕುರಿಸಿತು. ಬೇಸಿಗೆ ರಜೆಯಲ್ಲಿ ತಾತನ ಮನೆಯಲ್ಲಿದ್ದ ಪುಸ್ತಕಗಳು ಅವರ ಗಮನ ಸಳೆದವು. ಹೀಗೆ ಸಾಹಿತ್ಯಾಂಕುರವಾದ ಅನುಪಮಾ ಚಿಕ್ಕ ವಯಸ್ಸಿನಲ್ಲಿಯೇ ಶುಭಾ ಮತ್ತು ನಯನಾ ಎಂಬ ಕೈ ಬರಹದ ಎರಡು ಕಥಾಸಂಕಲನಗಳನ್ನು ಸಿದ್ಧಪಡಿಸಿದ್ದರು. ಮಗಳು ಕಥೆ, ಕಾದಂಬರಿ ಹುಚನ್ನು ವಿರೋಧಿಸುತ್ತಿದ್ದರು. ಇಂಟರ್ ಮಿಡಿಯಟನಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಬಡತನದ ಬವಣೆ ಎಂಬ ಕಥೆಗೆ ಬಹುಮಾನ ಬಂದಾಗ ತಾನೂ ಚೆನ್ನಾಗಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು.

ಅವರ ಪ್ರಥಮ ಕಾದಂಬರಿ ಅನಂತ ಗೀತೆ ೧೯೫೪ ರಲ್ಲಿ ಪ್ರಕಟಗೊಂಡಿತು. ೧೯೫೫ ರಲ್ಲಿ ಪ್ರಕಟಗೊಂಡ ಸಂಕೋಲೆಯೊಳಗಿಂದ ಕಾದಂಬರಿಯಲ್ಲಿ ಸ್ತ್ರೀ ಶೋಷಣೆಯ ಚಿಂತನೆಯೊಂದಿಕೆ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಚಿತ್ರಣ, ರೋಗಿಗಳ ಸಾವು-ನೋವು ಇವುಗಳ ಚಿತ್ರಣವಾಗಿದೆ. ಮಹಿಳೆಯರ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಅನುಪಮಾ ಅರೋಗ್ಯಕರ ಜೀವನಕ್ಕೆ ಮಾರ್ಗದರ್ಶನ ಮಾಡುವಂತಹ ವಿಶಿಷ್ಠ ಕೃತಿಗಳನ್ನು ರಚಿಸಿದ್ದಾರೆ. ವಧುವಿಗೆ ಕಿವಿಮಾತು, ದಾಂಪತ್ಯ ದೀಪಿಕೆ, ತಾಯಿ-ಮಗು ಇವರ ಪ್ರಸಿದ್ಧ ಕೃತಿಗಳು.

ಅನುಪಮಾ ಕತೆಗಳಿಂದ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದರೂ ನಂತರ ಕಾದಂಬರಿ, ಪ್ರವಾಸ ಕಥನ್, ಮಕ್ಕಳ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನಿತ್ತಿದ್ದಾರೆ. ನೆನಪು, ಸಿಹಿ-ಕಹಿ, ಬರಹಗಾರ್ತಿಯ ಬದುಕು ಅವರ ಆತ್ಮ ಕಥನಗಳು. ಅಂಗೈಯಲ್ಲಿ ಯೂರೋ ಅಮೇರಿಕೆ ಅವರ ಪ್ರವಾಸ ಕಥನ. ಮಕ್ಕಳಿಗಾಗಿ ದಿನಕ್ಕೊಂದು ಕಥೆಗಳನ್ನು ರಚಿಸಿದ್ದಾರೆ.
ಇವರ ಸಾಹಿತ್ಯ ಸೇವೆಗೆ ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ಅದೇ ವರ್ಷ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸಿ, ೧೯೮೩ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

ಸ್ನೇಹಮಯಿ, ಮಂದಸ್ಮಿತೆ, ಸರಳ ವ್ಯಕ್ತಿತ್ವದ ಸ್ತ್ರೀ ಸಂವೇದನೆಯ ಮಾನವೀಯ ಹೃದಯದ ಒಬ್ಬ ಧೀಮಂತ ಲೇಖಕಿ ಅನುಪಮಾ ನಿರಂಜನ ೧೯೯೧ ರಲ್ಲಿ ನಮ್ಮನ್ನು ಅಗಲಿದರು. ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಕನ್ನಡಿಗರೆಂದಿಗೂ ಮರೆಯಲಾರರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ ಎಸ್. ಆರ. ಗುಂಜಾಳ

ತನ್ನ ಜ್ಞಾನಕ್ರಿಯೆಗೆ ಕಾಣದ ಮಾರ್ಗದಿಂದ ಹಾವೇರಿಗೆ ಹಾರಿದರು. ಟಿಕೆಟ್ ರಹಿತ ರೈಲು ಪ್ರಯಾಣದ ನಂತರ ಅತ್ತಿತ್ತ ಅಲೆದು, ಹಸಿವು ನೀರಡಿಕೆಯಿಂದ ಬಳಲಿದ್ದ ಜೀವಕ್ಕೆ ನಿದ್ರೆ ಆವರಿಸಿದ್ದೇ ತಿಳಿಯದಾಗಿತ್ತು. ಮರುದಿನ ಎಚ್ಚರಾಗಿ ನೋಡಿದರೆ ಅದೊಂದು ಸ್ಮಶಾನವಾಗಿತ್ತು. ಹಾವೇರಿಯ ಬೋರ್ಡಿಂಗ್ ಅವಕಾಶ, ಆದರೆ, ಅಲ್ಲಿ ಕಾಯಕ ಎನ್ನುವದನ್ನರಿತು ಕೊಳ್ಳುವುದೂ ಶಿಕ್ಷಣ ಜೊತೆಗೇ ಶುರುವಾಯಿತು. ನಂತರ ಮಠಗಳ ಆಶ್ರಯ, ಆಧ್ಯಾತ್ಮಿಕದ ಅರಿವಿನ ಆಳ, ಆಚಾರ, ವಿಚಾರಗಳನ್ನು ಅರಿತುಕೊಂಡು ನಡೆಯುವ ಮಾರ್ಗವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಪ್ರಯತ್ನ ಮೂಕವೇದನೆಗಳಲ್ಲಿ ಮೀಯುತ್ತ ಸ್ನಾತಕ್ಕೋತ್ತರ ಪದವಿ ಪಡೆದು ಧಾರವಾಡದ ಆರ್. ಎಲ್. ಎಸ್ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಟ್ಯೂಟರಿ ಹುದ್ದೆಯನ್ನು ಅಲಂಕರಿಸಿದರು.
ಡಾ| ಎಸ್. ಆರ್. ಗುಂಜಾಳರು ಹೇಗೆ ಸ್ವಯಂ ಪ್ರತಿಭೆಯಿಂದ ನಿರಂತರ ಹೋರಾಟದ ಜೀವನ ನಡೆಸಿ ತಮ್ಮ ಬದುಕಿನುದ್ದಕ್ಕೂ ನಂಬಿಕೊಂಡು ನಡೆದ ಜೀವನ ಮೌಲ್ಯಗಳನ್ನು ಮುಗ್ಗುಲಿಗಿಟ್ಟುಕೊಂಡು ಗಟ್ಟಿಯಾಗಿ ಹಿಡಿದು ಸಾಗಿದ ಜೀವನ ರೋಮಾಂಅನ ಮತ್ತು ಮೌಲಿಕವಾದದ್ದು. ಮುಂದೆ ಇವರು ದೆಹಲಿಯ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪಗ್ರಂಥಪಾಲಕರಾಗಿ ಪ್ರಾರಂಭವಾದ ಯಾತ್ರೆ ಗ್ರಂಥಗಳ ರಚನೆಗೂ ಮುಂದಾದರು. ಸತತವಾಗಿ ತಮ್ಮನ್ನು ಪರಿಶ್ರಮಕ್ಕೊಳಪಡಿಸಿಕೊಂಡಿದ್ದರ ಪರಿಣಾಮದಿಂದ ಅಥವ ಅಪಾರ ಜ್ಞಾನ ಸಂಪಾದಿಸಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸಿದರು.

ಬಸವಣ್ಣನವರ್ನ್ನೊಳಗೊಂಡು ಹಲವು ಮಹಾನ್ ವ್ಯಕ್ತಿಗಳ ಪರಿಚಯವನ್ನು ಕನ್ನಡಿಗರಿಗೆ ಪರಿಚಯಿಸಿದರು. ಇದು ಇಂಗ್ಲೀಷ್ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದ ವಾಗಿರುವುದು ವಿಶೇಷ. ಶರಣರ ವಚನಗಳನ್ನು ಅಭ್ಯಸಿಸಿ, ಆಳಕ್ಕಿಳಿದು, ಅವುಗಳ ಕುರಿತು ಹಲಬಗೆಯ ಕೃತಿಗಳನ್ನು ರಚಿಸಿದರು. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ವಿವಿಧ ಜ್ಞಾನಗಳನ್ನು ಸಂಪಾದಿಸಬಲ್ಲ, ವಿಷಯಗಳನ್ನು ಅರಿಯಲು ಅನುಕೂಲವಾಗುವಂಥ ಸುಮಾರು ೧೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಬಗೆಯ ಗ್ರಂಥಗಳನ್ನು ರಚಿಸಿದವರು ಇವರೊಬ್ಬರೇ ಇರಬಹುದು. ಅಮೇರಿಕ, ಕೆನಡಾ ದೇಶಗಳಿಗೆ ಭೇಟಿ ನೀಡಿ ಪಾಶ್ಚಾತ್ಯ ಮತ್ತು ಪೌರಾತ್ಯ ಗ್ರಂಥಾಲಯಗಳ ತೌಲನಿಕ ಅಧ್ಯಯನ ಮಾಡಿ ಆ ವ್ಯವಸ್ಥೆಯನ್ನು ನಮ್ಮಲ್ಲೂ ತರುವ ಪ್ರಯತ್ನ ಮಾಡಿದರು. ಡಾ ಶ್ರೀ ಶೈಲ ಪಾಟಿಲ ಎನ್ನುವವರು Life and Works of Dr. S. R. Gunjal- A study ಎಂಬ ವಿಷಯ್ ಕುರಿತು ಪಿ.ಎಚ್.ಡಿ ಮಾಡಿದ್ದಾರೆ. ಒಬ್ಬ ಗ್ರಂಥಾಲಯ ವಿಜ್ಞಾನಿಯನ್ನು ಕುರಿತಾಗಿ ಪಿ.ಎಚ್.ಡಿ ಯಾಗಿದ್ದೂ ಇದೇ ಮೊದಲಿನದಾಗಿರಬಹುದು.
ಇವರನ್ನು ಕುರಿತು ಪಾಟೀಲ ಪುಟ್ಟಪ್ಪನವರು ‘ಇವರಿಗೆ ನೀವು ಎಷ್ಟೇ ಕೆಲಸ ಕೊಡಿ, ಕೆಲಸ ಸೋಲುತ್ತಿದೆಯೇ ವಿನಃ ಅವರೆಂದೂ ಸೋಲುವುದಿಲ್ಲ ಅವರೆಂದೂ ದಣಿಯುವುದಿಲ್ಲ”ಎಂದು ಹೇಳಿದ್ದಾರೆ. ಹೆಜ್ಜೆ ಹೆಜ್ಜೆಗೂ ಶರಣರ ನುಡಿ ಪಾಲಿಸುವದರೊಂದಿಗೆ ವಚನಗಳ ಕುರಿತು ಮತ್ತು ಶರಣರ ಕುರಿತು ಹಲವು ಮುಖದಿಂದ ಅಭ್ಯಸಿಸಿ, ಸಂಶೋಧನೆ ಮಾಡಿ, ಹೊಸ ಆಯಾಮ ನೀಡಿದ್ದು ಶ್ಲಾಘನೀಯ. ಕನ್ನಡ ಸಾಹಿತ್ಯದಲ್ಲೇ ಪ್ರಥಮ ಹಾಗು ಅಪರೂಪದ ಗ್ರಂಥ, ಬಸವಣ್ಣನವರ ವಚನ ಪದಪ್ರಯೋಗ ಎಂಬ ಬೃಹತ್ತಾಕಾರದ ಗ್ರಂಥ ಹೊರಬರಲು ಇವರ ಸತತ ೧೨ ವರ್ಷಗಳ ಪರಿಶ್ರಮದ ಫಲವೇ ಕಾರಣ. ಇದಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ ಪ್ರಶಸ್ತಿಗಳು ಬಂದಿವೆ.

ಸದಾ ನಯ-ವಿನಯದ ನಡೆ, ನುಡಿ. ಎಂದೂ ಎತ್ತರದ ಧ್ವನಿಯಲ್ಲಿ ಮಾತಾಡಿದವರಲ್ಲ. ಸದಾ ಓದು ಬರಹದಲ್ಲಿ ತಲ್ಲೀನ. ತುಂಬಿದ ಕೊಡದಂಥ ವ್ಯಕ್ತಿತ್ವ ಅವರದು. ಇವರು ಕೈಗೊಂಡ ಕಾರ್ಯ, ರಚಿಸಿದ ಗ್ರಂಥ, ವ್ಯಕ್ತಿತ್ವವನ್ನು ಗುರುತಿಸಿ ಹಲವಾರು ಪ್ರಮುಖ ಪ್ರಶಸ್ತಿಗಳು ಬಂದಿವೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಹಾ ಮಾ ನಾಯಕ

ಹಾಮಾನಾ ಎಂದೇ ಹೆಸರುವಾಸಿಯಾಗಿದ್ದ ಹಾರೋಗದ್ದೆ ಮಾನಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗದ್ದೆಯಲ್ಲಿ ೧೯೩೧ರ ಸೆಪ್ಟೆಂಬರ್ ೧೨ ರಂದು ರೈತಾಪಿ ಕುಟುಂಬದಲ್ಲಿ ಜನಿಸಿದರು. ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ, ಶಿವಮೊಗ್ಗದಲ್ಲಿ ಬಿ.ಎ ಮುಗಿಸಿ, ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯ ಸೇರುವುದರೊಂದಿಗೆ ಉನ್ನತ ವ್ಯಾಸಂಗ ವೇತನ ಪಡೆದು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಫುಲ್ ಬ್ರೈಟ್ ಶಿಷ್ಯವೇತನ ಪಡೆದು ಕನ್ನಡ ಸಾಹಿತ್ಯ ಮತ್ತು ಆಡು ಭಾಷೆ ವಿಷಯದ ಮೇಲೆ ಪ್ರಬಂಧ ಮಂಡಿಸಿ ಅಮೇರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಹಾಮಾನಾ ಅವರು ಸುಮಾರು ೨೯ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ‘ಸ್ವಂತ’ ಪುಸ್ತಕದ ರಕ್ಷಾ ಕವಚದಲ್ಲಿ ಕವಿ ನಾಡೋಜ ಚೆನ್ನವೀರ ಕಣವಿಯವರು ಹಾಮಾನಾರವರಲ್ಲಿ ಸೇವಕ, ನಾಯಕ, ಸಮರ್ಥ ಲೇಖಕ ಮೂವರ ಗುಣಗಳು ಸಮಕ್ಷಮಗೊಂಡಿವೆ. ಕನ್ನಡ ನಾಡಿನ ಸಮಸ್ಯೆಗಳನ್ನು ಅವರಂತೆ ಸಮಗ್ರವಾಗಿ ಪರಿಶೀಲಿಸಿ, ಪರಿಹಾರವನ್ನು ಸೂಚಿಸಿದವರು ಹಾಗೂ ಆ ಬಗ್ಗೆ ಯೋಚಿಸಿದವರು ನಮ್ಮಲ್ಲಿ ವಿರಳ, ಎಂದು ಹೇಳಿದ್ದಾರೆ.

ಹಾಮಾನಾ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ವರ್ಷ ಕೆಲಸ ಮಾಡಿದ ನಂತರವೂ ಅನೈತಿಕ ರಾಜಕಾರಣಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರ ಆತ್ಮ ಸಾಕ್ಷಿ ಒಪ್ಪದೇ ತಾತ್ವಿಕ ಕಾರಣಗಳನ್ನು ನೀಡಿ ಆ ಹುದ್ದೆಗೆ ರಾಜೀನಾಮೆ ಕೊಟ್ಟರು. ಅವರ ಬದುಕಿನ ನಿಲುವುಗಳೆಲ್ಲವೂ ಅವರ ವ್ಯಕ್ತಿತ್ವದ ನೈತಿಕತೆಯ ಗಟ್ಟಿತನಕ್ಕೆ ಬಳಕೆಯಾದುವೇ ಹೊರತು ವೈಯಕ್ತಿಕ ಪ್ರದರ್ಶನ ಪ್ರಚಾರಕ್ಕೆ ಬಳಕೆಗೊಳ್ಳಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಹಾಕಿಕೊಂಡಿದ್ದ ಯೋಜನೆಗಳಾದ ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಚರಿತ್ರೆ, ಶಾಸನ ಸಂಪುಟಗಳು, ಜಾನಪದ ವಸ್ತು ಸಂಗ್ರಹಾಲಯ ಮುಂತಾದವು ಕಾರ್ಯರೂಪಕ್ಕೆ ಬಂದವು.

ಚಿಕ್ಕಂದಿನಿಂದಲೂ ಸಾಹಿತ್ಯದ ಗೀಳು. ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಬಾಳ್ನೋಟಗಳು ಎಂಬ ಪ್ರಬಂಧ ಸಂಕಲನ ಪ್ರಕಟಿಸುವುದರೊಂದಿಗೆ ೧೩೦ಕ್ಕೂ ಹೆಚ್ಚು ಕೃತಿಗಳ ರಚನೆ. ವೈವಿಧ್ಯಮಯ ವಿಷಯಗಳ ರಸಪಾಕದಂತಿದ್ದ ಅಂಕಣ ಬರಹಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಸಂದರ್ಭಾನುಸಾರ ವಿಚಾರಗಳ ಪ್ರಸ್ತುತತೆಯ ಮೂಲಕ ಆಲೋಚನೆಗಳು ನಿರಂತರ ಬೆಳಕು ಕಾಣುತ್ತಿದ್ದುದೇ ವಿಶಿಷ್ಟ ರೀತಿ. ಅಂಕಣ ಬರಹಕ್ಕೆ ತೂಕ ಮತ್ತು ಗೌರವ ತಂದು ಕೊಡುವುದರೊಂದಿಗೆ ಅಂಕಣ ಬರಹಗಳ ಸಂಗ್ರಹ ‘ಸಂಪ್ರತ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಗೌರವಕ್ಕೆ ಇವರು ಪಾತ್ರರು.

ಬೀದರಿನಲ್ಲಿ ಜರುಗಿದ ಐವತ್ತೇಳನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ತುಳಸಿ ಸಮ್ಮಾನ, ಕರ್ನಾಟಕ ಸರ್ಕಾರದ ಪ್ರಶಸ್ತಿ, ಐಬಿಎಚ್ ಶಿಕ್ಷಣದತ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ. ಕನ್ನಡದ ಪ್ರೇಮಿ, ಕನ್ನಡದ ವಿದ್ವಾಂಸ, ಕನ್ನಡಕ್ಕೆ ಹಲವಾರು ಮೌಲಿಕ ಮತ್ತು ಸಕಾಲಿಕ ಕೊಡುಗೆಗಳನ್ನು ನೀಡಿದ ಎತ್ತರಕ್ಕೆ ಏರಿಯೂ ಎಲ್ಲರ ಹತ್ತಿರದವರಾಗಿದ್ದ ಔದಾರ್ಯ ವ್ಯಕ್ತಿತ್ವದ ಡಾ| ಹಾಮಾನಾ ಅವರು ೨೦೦೦ ದಲ್ಲಿ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿಗಳನ್ನು ಅಗಲಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಕೀರ್ತಿನಾಥ ಕುರ್ತಕೋಟಿ

ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರು, ಮಿಮರ್ಶಕರ ಸಾಲಿನಲ್ಲಿ ಕುರ್ತಕೋಟಿ ಅಗ್ರಗಣ್ಯರು. ಕಾವ್ಯ, ಹರಟೆ, ನಾಟಕ, ಕಾದಂಬರಿ, ಅನುವಾದ, ವಿಮರ್ಶೆ ಮುಂತಾದ ಹಲವು ಪ್ರಕಾರದ ಕನ್ನಡ ಸಾಹಿತ್ಯವನ್ನು ರಚನೆ ಮಾಡಿದವರು. ಇವರನ್ನು ಬಹಳ ಕಾಡಿದ ಕವಿಗಳೆಂದರೆ ಕುಮಾರವ್ಯಾಸ ಮತ್ತು ಬೇಂದ್ರೆ. ಈ ಕವಿಗಳ ಸಾಹಿತ್ಯ ಸಾಕುಬೇಕಾದಷ್ಟು ಓದಿ, ಸಾಹಿತ್ಯ ಸಮಯವನ್ನು ಒರೆಗೆ ಹಚ್ಚಿದವರು ಕುರ್ತಕೋಟಿ. ಸಾಹಿತ್ಯ ಸಂಗಾತಿ ವಿಮರ್ಶಾ ಕೃತಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದವರು.

ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಕುರ್ತಕೋಟಿಯವರ ನೆಚ್ಚಿನ ವಿಷಯಗಳಾಗಿದ್ದವು. ಕನ್ನಡ ಸಾಹಿತ್ಯಕ್ಕೆ ಸ್ಪಷ್ಟ ದಾರಿಯನ್ನು ತೋರಿಸಿದ ಕೀರ್ತಿನಾಥರು ಕನ್ನಡ ವಿಮರ್ಶೆಗೆ ಗಟ್ಟಿ ತಳಪಾಯ ಹಾಕಿದರು. ಕವಿಯ ಕಾವ್ಯ ಯಾವ ರೀತಿ ಓದಬೇಕು, ಅದನ್ನು ಹೇಗೆ ಗ್ರಹಿಸಬೇಕು, ಅದರ ಶೈಲಿ, ಪದಗಳ ಬಳಕೆ ಮುಂತಾದವುದನ್ನು ಅವರ ವಿಮರ್ಶೆ ಸಾಕ್ಷತ್ಕರಿಸುತ್ತದೆ.

ಕುರ್ತಕೋಟಿಯವರು ಗದಗ ಸಮೀಪದ ಕುರ್ತಕೋಟಿ ಎಂಬ ಗ್ರಾಮದಲ್ಲಿ ೧೯೨೮ರ ಅಕ್ಟೋಬರ್ ೧೩ ರಂದು ಜನಿಸಿದರು. ಇವರದು ವಿದ್ವತ್ ಪರಂಪರೆಯುಳ್ಳ ಸುಸಂಸ್ಕೃತ ಮನೆತನ. ಅಜ್ಜನ ಹೆಸರನ್ನು ಇವರಿಗೆ ಇಟ್ಟ ಕಾರಣ ಇವರ ಪೂರ್ಣ ಹೆಸರು ಕೀರ್ತಿನಾಥ ದತ್ತಪ್ಪಗೌಡ ಕುರ್ತಕೋಟಿ. ಪ್ರಾಥಮಿಕ ಪ್ರೌಢ ಶಿಕ್ಷಣ ಗದುಗಿನಲ್ಲಾದರೆ, ಧಾರವಾಡದಲ್ಲಿ ಪದವಿಯನ್ನು ಪಡೆದರು. ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಚ್ಚುಮೆಚ್ಚಿನ ಮಾಸ್ತರರಾಗಿ ಕೀರ್ತಿ ಮಾಸ್ತರೆಂದೇ ಪ್ರಸಿದ್ಧಿ ಪಡೆದರು. ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಪುಣೆಯ ಸರ್.ಪರಶುರಾಮ ಭಾವು ಕಾಲೇಜಿನಲ್ಲಿ ಕೆಲ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇವರ ವಿದ್ವತ್ ಪೂರ್ಣತೆಯನ್ನು ಗುರುತಿಸಿ ಗುಜರಾತಿಅನ ಆನಂದದಲ್ಲಿರುವ ವಲ್ಲಭ ವಿದ್ಯಾನಗರ ಕಾಲೇಜಿನ ಪ್ರಾಂಶುಪಾಲರು ತಮ್ಮ ಸಂಸ್ಥೆಗೆ ಉಪನ್ಯಾಸಕರಾಗಿ ಕರೆಸಿಕೊಂಡರು. ೩೨ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಚೈತನ್ಯದ ಚಿಲುಮೆಯಾಗಿ ೧೯೮೯ರಲ್ಲಿ ನಿವೃತ್ತರಾದರು.

ಇವರು ಬಿ.ಎ. ವ್ಯಾಸಂಗ ಮಾದುತ್ತಿದ್ದಾಗಲೇ ಮಿತ್ರರಾದ ಪುಣೇಕರರೊಡಗೂಡಿ ಹೊರತಂದ ಕವನ ಸಂಕಲನ ಗಾನಕೇಳಿ, ನಂತರ ನಾಟಕ, ವಿಮರ್ಶೆ ಬರೆಯಲು ಪ್ರಾರಂಭಿಸಿದರು. ಉರಿಯ ನಾಲಿಗೆ, ಕುಮಾರವ್ಯಾಸ, ನೂರು ಮರ ನೂರ ಸ್ವರ, ಬಾರೋ ಸಾಧನಕೇರಿಗೆ, ಬಯಲು ಆಲಯ, ಹೊಸಗನ್ನಡದಲ್ಲಿ ಮಹಾಕಾವ್ಯ, ಇವು ಅವರ ವಿಮರ್ಶಾ ಕೃತಿಗಳು. ಕನ್ನಡವಷ್ಟೇ ಅಲ್ಲದೆ ಆಂಗ್ಲಭಾಷೆಯಲ್ಲೂ ಇವರ ಕೃತಿಗಳನ್ನು ಕಾಣಬಹುದು. ಹಲವಾರು ಸಂಸ್ಥೆಗಳಲ್ಲಿ ಇವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮರಾಠಿ ಸಂಸ್ಕೃತಿ ಕೆಲವು ಸಮಸ್ಯೆಗಳು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉರಿಯ ನಾಲಿಗೆ ಅಂಕಣ ಬರಕ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಗೌರವಗಳು ಇವರನ್ನು ಹುಡುಕಿಬಂದಿವೆ.

೨೦೦೩ ರಲ್ಲಿ ಇವರು ಇಹಲೋಕದ ಯಾತ್ರೆಯನ್ನು ಮುಗಿಸಿದರು. ಧಾರವಾಡದಲ್ಲಿ ಕುರ್ತಕೋಟಿಯವರ ನೆನಪಿಗಾಗಿ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಿ ಅವರಿಗೆ ನಮನ ಸಲ್ಲಿಸಲಾಗಿದೆ.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ತ್ರಿವೇಣಿ

ಮಹಿಳಾ ಅಭಿವ್ಯಕ್ತಿಯ ಪರಂಪರೆಯಲ್ಲಿ ಎರಡನೆಯ ತಲ್ಮಾರಿಗೆ ಸೇರಿದ ಮುಖ್ಯ ಲೇಖಕಿ ತ್ರಿವೇಣಿ. ಸಣ್ಣಕಥೆ ಮತ್ತು ಕಾದಂಬರಿ ಪ್ರಕಾರಗಳನ್ನು ಪ್ರಮುಖವಾಗಿ ಆಯ್ದುಕೊಂಡ ತ್ರಿವೇಣಿ ತಮಗೆ ಲಭಿಸಿದ ನಿರ್ದಿಷ್ಟ ಜೀವನಾನುಭವ ಮತ್ತು ಮನಃಶಾಸ್ತ್ರದ ಓದಿನ ಜ್ಞಾನದೊಂದಿಗೆ ಕೆಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ.

ಕನ್ನಡದ ಕಣ್ವ ಬಿ.ಎಂ.ಶ್ರೀ ರವರ ತಮ್ಮ ಬಿ.ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳು ತ್ರಿವೇಣಿ. ಹುಟ್ಟಿದ್ದು ಮೈಸೂರಿನಲ್ಲಿ, ಹುಟ್ಟಿದಾಗ ಇವರ ಹೆಸರು ಭಾರೀರಥಿ, ಶಾಲೆಗೆ ಸೇರುವಾಗ ಅನುಸೂಯ ಎಂದು ದಾಖಲಿಸಲಾಯಿತು, ವಿದ್ಯಾಭ್ಯಾಸ ಮಂಡ್ಯ ಮತ್ತು ಮೈಸೂರಿನಲ್ಲಿ ನಡೆಯಿತು ೧೯೪೭ರಲ್ಲಿ ಬಂಗಾರದ ಪದಕದೊಂದಿಗೆ ಬಿ.ಎ. ಪದವಿಯನ್ನು ಮನಃಶಾಸ್ತ್ರದ ವಿಷಯದಲ್ಲಿ ಪಡೆದರು. ೧೯೫೧ರಲ್ಲಿ ವಿವಾಹವಾಗಿ ಅನುಸೂಯ ಶಂಕರ್ ಆದರು. ಇವರ ಸಮಕಾಲಿನವರಾದ ಎಂ.ಕೆ. ಇಂದಿರಾ ಇವರ ಉದ್ದ ಕೇಶರಾಶಿಯನ್ನು ಕಂಡು ಬೆರಗಾಗಿ ‘ಅನುಸೂಯಾ ನೀವು ತ್ರಿವೇಣಿಯಾಗಬಹುದು’ಎಂದು ಚೇಷ್ಟೆ ಮಾಡಿದ್ದರಂತೆ, ಆ ಹೆಸರು ತುಂಬಾ ಇಷ್ಟವಾಇದ್ದರಿಂದ ತ್ರಿವೇಣಿ ಎಂದೇ ತಮ್ಮ ಕಾವ್ಯನಾಮವನ್ನು ಇಟ್ಟುಕೊಂಡರು.

ಇವರ ಒಟ್ಟು ಬರವಣಿಗೆಯ ಅವಧಿಯೇ ೧೯೫೩ ರಿಂದ ೧೯೬೩. ಸುಮಾರು ಒಂದು ದಶಕ ಮಾತ್ರ. ಈ ಅವಧಿಯಲ್ಲಿ ೩ ಕಥಾಸಂಕಲನ್, ೨೦ ಕಾದಂಬರಿ ಮತ್ತು ಒಂದು ಅಪೂರ್ವ ಕಾದಂಬರಿಯನ್ನು ರಚಿಸಿದ್ದಾರೆ.

ಹೆಂಡತಿಯ ಹೆಸರು, ಎರಡು ಮನಸ್ಸು, ಸಮಸ್ಯೆಯ ಮಗು – ಇವು ತ್ರಿವೇಣಿಯವರ ಕಥಾಸಂಕಲನಗಳಾದರೆ, ಹೂವು ಹಣ್ಣು, ಅಪಸ್ವರ-ಅಪಜಯ, ಸೋತು ಗೆದ್ದವಳು, ಕೀಲುಗೊಂಬೆ, ಮೊದಲ ಹೆಜ್ಜೆ, ಹೃದಯಗೀತೆ ಮುಂತಾದವು ಇವರ ಕಾದಂಬರಿಗಳು. ಸಣ್ಣಕಥೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರಾದರೂ ಕಾದಂಬರಿ ಪ್ರಕಾರವೇ ಅವರ ಜಾಯಮಾನಕ್ಕೆ ಹೆಚ್ಚು ಒಗ್ಗಿಕೊಂಡಂತೆ ಕಾಣುತ್ತದೆ.

ಮೇಲ್ನೋಟಕ್ಕೆ ಜನಪ್ರಿಯ ಬರಹಗಳಂತೆ ತೋರುವ ಕಾದಂಬರಿಗಳು ತ್ರಿವೇಣಿಯವರ ಅಧ್ಯಯನದ ಫಲಿತಗಳಾಗಿದ್ದವು. ತ್ರಿವೇಣಿ ಮನಃಶಾಸ್ತ್ರದ ಪದವೀಧರರು. ಅಲ್ಲಿ ಗಳಿಸಿದ ಜ್ಞಾನವನ್ನು ಸಾಹಿತ್ಯ ಶೋಧನ್ಗೆ ಮಾಧ್ಯಮವಾಗಿಸಿಕೊಂಡರು. ಇವರ ಕಥನಗಳು ಅಪಾರ ಓದುಗ ವರ್ಗವನ್ನು ಪಡೆದು ಜನಪ್ರೀತಿ ಗಳಿಸಲು, ಸಿನಿಮಾಗಳಾಗಿ ಮನ್ನಣೆ ಗಳಿಸಲು ಅವರು ಅನುಸರಿಸಿದ ಮಧ್ಯಮ ಪಥವೇ ಕಾರಣವಾಗಿದೆ. ಇವರು ೧೯೬೩ರಲ್ಲಿ ಇಹಲೋಕವನ್ನು ತ್ಯಜಿಸಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಡಾ| ಸರೋಜಿನಿ ಮಹಿಷಿ

ಭಾರತದ ರಾಜಕೀಯ ಇತಿಹಾಸದಲ್ಲಿ, ಕನ್ನಡ ವಿದ್ವತ್ ಪ್ರಪಂಚದಲ್ಲಿ ಡಾ ಸರೋಜಿನಿ ಮಹಿಷಿಯವರಿಗೆ ಮಹತ್ವದ ಸ್ಥಾನವಿದೆ. ನಿರಂತರ ಪರಿಶ್ರಮ, ಛಲದಿಂದ ಉನ್ನತ ಶಿಕ್ಷಣ ಪಡೆದು ರಾಜಕೀಯ ಕ್ಷೇತ್ರದ ಮೆಟ್ಟಿಲುಗಳನ್ನೇರಿ ದಕ್ಷ ಆಡಳಿತ, ಪ್ರಾಮಾಣಿಕ ಸೇವೆಯಿಂದ ಯಶಸ್ಸನ್ನು ಸಾಧಿಸಿದವರು.

ಮಹಿಷಿ ಮನೆತನದ ಬಿಂದೂರಾವ್ ಹಾಗು ಕಮಲಾಬಾಯಿಯವರ ದ್ವಿತೀಯ ಪುತ್ರಿಯಾಗಿ ಸರೋಜಿನಿ ೧೯೨೭ರಲ್ಲಿ ಜನಿಸಿದರು. ಇವರ ಪೂರ್ವಜರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದವರಾಗಿದ್ದರು. ಸರೋಜಿನಿಯವರು ಧಾರವಾಡದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ೫ನೇ ತರಗತಿಯವರೆಗೆ ಕಲಿತು, ಕರ್ನಾಟಕ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಯವರೆಗೆ ಶಿಷ್ಯವೇತನದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತ ಬಂದರು. ವಿಲ್ಲಿಂಗ್ಟನ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ೧೯೪೭ರಲ್ಲಿ ಪೂರೈಸಿ ಪ್ರಥಮ ಸ್ಥಾನವನ್ನು ಪಡೆದರು. ಅದೇ ಕಾಲೇಜಿನ ಸ್ತಾನಕೋತ್ತರ ಪದವಿಯನ್ನು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದರು. ನಂತರ ೨ ವರ್ಷ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ತಂದೆಯ ಕಡೆಯಿಂದ ಬಂದ ಸಂಸ್ಕಾರ ಅವರನ್ನು ಕಾನೂನು ಅಭ್ಯಾಸದ ಕಡೆಗೆ ಸೆಳೆಯಿತು. ೧೯೫೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್ ಪಡೆದು ಮನೆತನಕ್ಕೆ ಕೀರ್ತಿ ತಂದರು. ೫೮-೫೯ರವರೆಗೆ ಭಾರತೀಯ ಸಂವಿಧಾನದ ಶಾಸನಗಳು ಎಂಬ ವಿಷಯದ ಬೋಧಕರಾಗಿ ಸೇವೆ ಸಲ್ಲಿಸುತ್ತ ಕಾನೂನು ಕಲಿಸಿದ ಪ್ರಥಮ ಮಹಿಳೆಯೆನಿಸಿದರು.

ಇಷ್ಟೆಲ್ಲ ಸಾಧನೆಯ ನಡುವೆಯೂ ಅವರು ಸಾಹಿತ್ಯವನ್ನು ಬಿಡಲಿಲ್ಲ. ಸಾಹಿತ್ಯ ಸಂಶೋಧನೆಯ ಕ್ಷೇತ್ರದೆಡೆಗೆ ಹೆಜ್ಜೆ ಹಾಕಿದರು. ಪ್ರೊ. ಸ. ಸ. ಮಾಳವಾಡರ ಮಾರ್ಗದರ್ಶನದಲ್ಲಿ ಕರ್ನಾಟಕದ ಕವಯತ್ರಿಯರು ಎಂಬ ಮಹಾಪ್ರಬಂಧವನ್ನು ಸಲ್ಲಿಸಿದರು. ಊರೂರು ಮಠಗಳಿಗೆ ಅಲೆದು ಹಸ್ತಪ್ರತಿ ಸಂಗ್ರಹಿಸಿ ಈ ಅಧ್ಯಯನವನ್ನು ಕೈಗೊಂಡರು. ಕರ್ನಾಟಕದ ಕುರಿತು ಮೊದಲ ಸಂಶೋಧನ ಕೃತಿ ಇದಾಗಿದೆ. ಇವರ ಸೇವೆ ಬಹುಮುಖವಾದುದು. ಶಿಕ್ಷಣ, ಸಾಮಾಜಿಕ, ರಾಜಕೀಯ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತ ಬಂದವರು. ಹಲವಾರು ಶಿಕ್ಷಣ ಸಂಸ್ಥೆಗಳೊಡನೆ ನಿಕಟ ಸಂಪರ್ಕ ಹೊಂದಿ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಿದರು ತಮ್ಮದೇ ಆದ ಪ್ರಾಥಮಿಕ, ಮಾಧ್ಯಮಿಕ ಹಾಗು ಟ್ರೇನಿಂಗ್ ಕಾಲೇಜುಗಳ ಸಂಚಾಲಕರಾಗಿ ಶಿಕ್ಷ್ಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಇವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಾಧ್ಯಕ್ಷರಾಗಿ ಒರಿಸ್ಸಾ, ಜಗನ್ನಾಥಪುರಿ, ಜಯಪುರ, ಭೂಪಾಲ, ಶೃಂಗೇರಿ, ಕೇರಳ, ಗುರುವಾಯೂರ್ಗಳಲ್ಲಿ ಸಂಸ್ಕೃತ ಸಂಸ್ಥಾನದ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗಿದ್ದರೆ.
ರಾಜಕೀಯದಲ್ಲಿ ಇವರ ಸಾಧನೆ ಅಪರೂಪವಾದುದು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪೈಕಿ ಇವರು ಅಗ್ರಗಣ್ಯರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದ ಮಹಿಳೆ. ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತಸಚಿವರಾಗಿ ದಕ್ಷ ಕಾರ್ಯ ನಿರ್ವಹಿಸಿದವರು. ೧೯೭೪-೭೬ರ ಅವಧಿಯಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರ ಖಾತೆಯಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಐಹೊಳೆ, ಪಟ್ಟದಕಲ್ಲು, ಬಾದಾಮಿಯಂತಹ ಐತಿಹಾಸಿಕ ಕ್ಷೇತ್ರಗಳಲ್ಲಿ ಪ್ರವಾಸಿ ಮಂದಿರಗಳನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಕರ್ನಾಟಕ ಸರಕಾರ ನೇಮಿಸಿದ ಆಯೋಗದ ಅಧ್ಯಕ್ಷರಾಗಿ ೧೯೮೪-೮೬ರ ಅವಧಿಯಲ್ಲಿ ಮಹಿಷಿ ವರದಿಯನ್ನು ಸಲ್ಲಿಸಿದ್ದಾರೆ.
ರೂಪಾ ಕಥಾ ಸಂಕಲನ, ಸ್ವಾತಂತ್ರ ಕಹಳೆ, ಹಿಮಾಚಲದಿಂದ ರಾಮೇಶ್ವರ, ಮುಳ್ಳುಗುಲಾಬಿ ಇವು ಮಹಿಷಿಯವರ ಸಾಹಿತ್ಯ ಕೃತಿಗಳು. ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಸಮರ್ಥವಾಗಿ ಅನುವಾದಿಸಿದ್ದಾರೆ. ಕಾರಂತರ ಅಪೂರ್ವ ಪಶ್ಚಿಮ ಪ್ರವಾಸ ಕಥನ, ಕುವೆಂಪುರ ರಾಮಾಯಣ ದರ್ಶನಂ ಕಾವ್ಯವನ್ನು ಹಿಂದಿಗೆ ಸರಳ ಸುಂದರ ಶೈಲಿಯಲ್ಲಿ ಅನುವಾದಿಸಿದ್ದಾರೆ.

ಸಾಹಿತ್ಯ ಮಂಥನ ವೆಂಬುದು ಬಾಣ, ಕಾಳಿದಾಸ, ನಾಗವರ್ಮ, ಜಯಕೀರ್ತಿಯಂತಹ ಉದ್ಧಾಮ ಕವಿಗಳನ್ನು ಅವರ ಸಾಹಿತ್ಯವನ್ನು ಕುರಿತು ಬರೆದಿರುವ ವಿದ್ವತ್ಪೂರ್ಣ ಗ್ರಂಥ. ಕರ್ನಾಟಕದ ಕವಯತ್ರಿಯರು ವೇದ ಕಾಲದಿಂದ ಆಧುನಿಕ ಕಾಲದವರೆಗಿನ ಸಾಮಾಜಿಕ ಹಿನ್ನಲೆಯಲ್ಲಿ ಕವಯತ್ರಿಯರ ಕವ್ಯ ಪರಂಪರೆಯನ್ನು ಅದರಲ್ಲೂ ಕನ್ನಡ ಕವಯತ್ರಿಯರ ಸಾಧನೆಯನ್ನು ಕನ್ನಡಿಗರಿಗೆ ಪರಿಚಯಿಸಿದ ಮೊದಲ ಸಂಶೋಧನ ಕೃತಿಯಾಗಿದೆ.

ಕರ್ನಾಟಕದ ಹೆಮ್ಮೆಯ ಮಹಿಳೆಯಾಗಿರುವ ಡಾ|ಸರೋಜಿನಿ ಮಹಿಷಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ೨೦೦೯ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ರಾಜಕೀಯ ಮುತ್ಸದಿಯಾಗಿ, ಸಾಹಿತಿಯಾಗಿ, ಸಂಘಟಕರಾಗಿ, ಶಿಕ್ಷಣ ಕ್ಷೇತ್ರದ ಚಿಂತಕೆಯಾಗಿ, ದಕ್ಷ ಆಡಳಿತಗಾರರಾಗಿ ನಮ್ಮ ದೇಶಕ್ಕೆ, ನಾಡಿಗೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ೨೦೦೫ರಲ್ಲಿ ವಿಧಿವಶರಾದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಶಾಂತಾದೇವಿ ಮಾಳವಾಡ

೨೦ನೇ ಶತಮಾನದ ಮೊದಲ ಭಾಗದಲ್ಲಿ ಲೆಕ್ಕಣಿಕೆಯನ್ನು ಕೈಗೆತ್ತಿಕೊಂಡ ಲೇಖಕಿಯರು ಕಥನ ಸಾಹಿತ್ಯದತ್ತ ಒಲವು ತೋರಿದರು. ಅಂತಹವರಲ್ಲಿ ಶಾಂತಾದೇವಿ ಮಾಳವಾಡರು ಪ್ರಮುಖರು. ಇವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಮಹಿಳಾ ಸಂಘಟನೆಯ ರೂವಾರಿಯಾಗಿ ಮಾಡಿದ ಸಾಧನೆ ಗಮನಾರ್ಹ.

ಶಾಂತಾದೇವಿಯವರು ಹುಟ್ಟಿದ್ದು ೧೯೨೨ ಡಿಸೆಂಬರ್ ೧೦ರಂದು ಬೆಳಗಾವಿಯಲ್ಲಿ. ೧೯ನೇ ಶತಮಾನದ ಉತ್ತರಾರ್ಧದಲ್ಲಿಯೆ ಮುಲ್ಕಿ ಪರೀಕ್ಷೆಯವರೆಗೆ ಅವರು ಓದಿದವರಾಗಿದ್ದರು. ತಮ್ಮ ಮುದ್ದಿನ ಮಗಳಿಗೆ ದಂಪತಿಗಳು ಮನೆದೇವತೆಯಾದ ದಾನಮ್ಮಳ ಹೆಸರನ್ನೇ ಇಟ್ಟರು. ಎರಡು ವರ್ಷದವರಾಗಿದ್ದಾಗ ಇವರಿಗೆ ತಂದೆಯ ಅಕಾಲಿಕ ವಿಯೋಗ, ಹತ್ತನೇ ವಯಸ್ಸಿನಲ್ಲಿ ತಾಯಿಯ ವಿಯೋಗವಾಯಿತು. ಮುಂದೆ ಇವರು ಅಜ್ಜಿಯ ಮಡಿಲಲ್ಲಿ ಬೆಳೆದರು. ಪೌರಾಣಿಕ ಕಥೆಗಳನ್ನು, ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದರು.

ದಾನಮ್ಮ ಬೆಳಗಾವಿಯ ವನಿತಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಶುರುಮಾದಿದರು. ಹೈಸ್ಕೂಲ್ ಎರಡನೆಯ ತರಗತಿಯಲ್ಲಿರುವಾಗಲೇ ದೊಡ್ಡಪ್ಪನವರ ಆದೇಶದಂತೆ ಶಾಲೆ ಬಿಡಬೇಕಾಯಿತು. ಮುಂದೆ ಓದುವ ಹಟದಿಂದ ದಾನಮ್ಮ ಎರಡು ದಿನ ಉಪವಾಸ ಮಾಡಿದರಾದರು ಅನುಮತಿ ಸಿಗಲಿಲ್ಲ. ಸ್ನೇಹಿತೆಯರಿಂದ ಕಥೆ, ಕಾದಂಬರಿಗಳನ್ನು ತಂದು ಓದುವ ಹವ್ಯಾಸವನ್ನು ಜೀವಂತವಾಗಿರಿಸಿಕೊಂಡರು.

೧೪ನೇ ವಯಸ್ಸಿಗೆ ಪ್ರೊ. ಸ. ಸ. ಮಾಳವಾಡರೊಂದಿಗೆ ವಿವಾಹ ನಿಶ್ಚಯವಾಯಿತು. ೧೫ವರ್ಷ ತುಂಬುವವರೆಗೆ ಮದುವೆಗೆ ಅವಕಾಶವಿರಲಿಲ್ಲವಾದ್ದರಿಂದ ಆ ಒಂದು ವರ್ಷದ ಅವಧಿಯಲ್ಲಿ ಅವರು ಹಾಗು ಪ್ರೊ. ಮಾಳವಾಡರ ನಡುವೆ ಪತ್ರವ್ಯವಹಾರದ ವಿನಿಮಯ ನಡೆಯಿತು. ಸೂತ್ರದಗೊಂಬೆ, ಬಂಧನದ ಆಚೆ ಮುಂತಾದ ಪುಸ್ತಕಗಳನ್ನು ದಾನಮ್ಮವರಿಗೆ ಓದಲು ಕಳಿಸುತ್ತಿದ್ದ ಮಾಳವಾಡರು, ತಮ್ಮ ಪತ್ನಿ ಮನೆಗೆಲಸದ ದಾಸಿಯಾಗದೆ ಬಾಳಸಂಗಾತಿಯಾಗಬೇಕೆಂಬ ಅಭಿಪ್ರಾಯ ಸ್ಪಷ್ಟಪದಿಸಿದರು. ಇದು ದಾನಮ್ಮನ ಮನಸ್ಸಿನಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿತು. ಮದುವೆಯಾದ ನಂತರ ಪ್ರೊ. ಮಾಳವಾಡರು ಕೊಟ್ಟ ಹೆಸರು ಶಾಂತಾದೇವಿ, ಅದು ಅವರಿಗೆ ಸಂದ ಅರ್ಥಪೂರ್ಣ ನಾಮವಾಯಿತು. ೩೫ ಜನ ಸದಸ್ಯರಿರುವ ಅವಿಭಕ್ತ ಕುಟುಂಬದಲ್ಲಿ ಸೊಸೆಯಾಗಿ ಬಂದ ಕಿರುವರೆಯದ ಶಾಂತಾದೇವಿ ಆಧುನಿಕತೆ ಸಂಪ್ರದಾಯನಿಷ್ಟತೆಯನ್ನು ಬೆಸೆವ ಕೊಂಡಿಯಾಗಿ ತೂಕ ತಪ್ಪದಂತೆ ಸಮನ್ವಯ ಸಾಧಿಸಿದ್ದು ನಿಜಕ್ಕೂ ಶ್ಲಾಘನೀಯ. ಸಂಸಾರದ ಒತ್ತಡಗಳ ಮಧ್ಯದಲ್ಲೂ ಸ್ವಧ್ಯಯನ ಮುಂದುವರೆಸಿ, ೧೯೪೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪ್ರೊ. ಮಾಳವಾಡರ ಮಾರ್ಗದರ್ಶನದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯ ಅಧ್ಯಯನ ಮಾಡಿದರು.

ಸಾಹಿತಿಯಾಗಿ ಶಾಂತಾದೇವಿಯವರ ಸಾಹಿತ್ಯ ಕೃಷಿ ವಿಪುಲ ಹಾಗೂ ವೈವಿಧ್ಯಪೂರ್ಣ. ಕಥಾ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿದ ಅವರು ಕಾದಂಬರಿ, ಜೀವನ ಚರಿತ್ರೆ, ಪ್ರಬಂಧ ಪ್ರವಾಸ ಕಥನ ಆತ್ಮಚರಿತ್ರೆ ಮಕ್ಕಳ ಪುಸ್ತಕ ಹೀಗೆ ಒಟ್ಟು ನಲವತ್ತಾರು ಕೃತಿಗಳ ಕರ್ತೃ. ೧೯೪೧ರಲ್ಲಿ ಅವರ ಮೊದಲ ಕಥಾ ಸಂಕಲನ ಮೊಗ್ಗೆಯ ಮಾಲೆ ಪ್ರಕಟವಾಯಿತು. ಅಕ್ಕಮಹಾದೇವಿಯವರ ಜೀವನದ ಮಹತ್ವಘಟನೆ ಹಾಗು ವಚನಗಳನ್ನಾಧರಿಸಿದ ಅಕ್ಕನ ಭಾವಸೌರಭ ಪ್ರಕಟವಾಯಿತು. ಬಸವಪ್ರಕಾಸಹ್, ದಾನದಾಸೋಹಿ ದಾನಮ್ಮ ಹಾಗು ಶೂರರಾಣಿ ಕೆಳದಿ ಚಿನ್ನಮ್ಮ ಶಾಂತಕ್ಕನವರ ಮೂರು ಕಾದಂಬರಿಗಳು.

ಮಹಿಳಾ ಪ್ರಧಾನ ರಚನೆಯತ್ತ ವಿಶೇಷ ಒಲವು ತೋರಿದ ಶಾಂತಕ್ಕನವರು ಸೊಬಗಿನ ಮನೆ, ದಾಂಪತ್ಯ ಯೋಗ, ವಧಿವಿನ ಉಡುಗೊರೆ, ೮ ಬಾರಿ ಮುದ್ರಣಗೊಂಡ ರಸಪಾಕ ಇವರ ಮಹಿಳಾ ಪರ ವಿಶೇಷ ಆಸಕ್ತಿಗೆ ಸಾಕ್ಷಿ. ಶಿಲ್ಪ ಸಾಹಿತ್ಯದಲ್ಲಿ ವ್ಯಕ್ತವಾದ ಮಹಿಳಾಕೇಶ ವಿನ್ಯಾಸ, ತೊಡಿಗೆ, ಉಡಿಗೆಗಳ ಅಲಂಕಾರವನ್ನು ಆಧುನಿಕ ಅಲಂಕಾರಗಳೊಂದಿಗೆ ಚಿತ್ರವತ್ತಾಗಿ ಸಮೀಕರಿಸಿ ವಿವರಿಸುವ ಮಹಿಳೆಯರ ಅಲಂಕಾರ ವಿದ್ವಾಂಸರು ಗುರುತಿಸಿರುವಂತೆ ಇವರ ಕೃತಿಗಳಿಗೆಲ್ಲ ಮುಡಿಪ್ರಾಯದ ಸಂಶೋಧನಾತ್ಮಕ ಕಲಾತ್ಮಕ ಕೃತಿ.

ಶ್ರೀಗಿರಿಯಿಂದ ಹಿಮಗಿರಿಗೆ ಶಾಂತಕ್ಕನವರು ಬರೆದ ಪ್ರವಾಸ ಕಥನ. ಪ್ರೊ. ಮಾಳವಾಡರು ವಿಧಿವಶರಾದಾಗ ಅವರು ಬರೆಯುತ್ತಿದ್ದ ಆತ್ಮಚರಿತ್ರೆ ಅಪೂರ್ಣವಾಗಿತ್ತು. ಶಾಂತಾದೇವಿ ತಮಗಾದ ಅನೂಹ್ಯ ದುಃಖವನ್ನು ಅದುಮಿಟ್ಟುಕೊಂಡು ಅವರ ಆತ್ಮಚರಿತೆಯನ್ನು ಪೂರ್ಣಗೊಳಿಸಿದರು. ೧೯೩೮ರಲ್ಲಿ ಅವರು ಕೆಲವೇ ಜನ ಮಹಿಳೆಯರನ್ನು ಕೂಡಿಸಿ ಸ್ಥಾಪಿಸಿದ ಅಕ್ಕನ ಬಳಗ ಇಂದು ಒಂದು ಮಹತ್ವದ ಮಹಿಳಾ ಸಂಘಟನೆಯಾಗಿದೆ. ೧೯೪೦ರಲ್ಲಿ ಧಾರವಾಡದಲ್ಲಿದ್ದ ಅಖಿಲ ಭಾರತ ಮಹಿಳಾ ಪರಿಷತ್ತಿನ ಸದಸ್ಯೆಯಾಗಿ ಮರಾಠಿಮಯವಾಗಿದ್ದ ಆ ಸಂಸ್ಥೆಯನ್ನು ಕನ್ನಡತಿಯರ ಸಂಸ್ಥೆಯನ್ನಗಿಸಿ, ಕಾರದರ್ಶ್ಯಾಗಿ ಕೆಲಸ ಮಾಡಿದರು.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೯೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಇವು ಶಾಂತಕ್ಕನವರನ್ನು ಹುಡುಕಿಕೊಂದು ಬಂದ ಪ್ರತಿಷ್ಠಿತ ಪ್ರಶಸ್ತಿಗಲೂ. ತಮಗೆ ಬಂದ ಪ್ರಶಸ್ತಿಯ ಹಣವನ್ನು ಶಾಂತಕ್ಕ ಅನೇಕ ಸಂಘ ಸಂಸ್ಥೆಗಳಿಗೆ ದತ್ತಿಯಾಗಿ ನೀಡಿದುದು ಅವರ ಔದಾರ್ಯಕ್ಕೆ ನಿದರ್ಶನ. ಇವರು ೨೦೦೫ರಂದು ನಮ್ಮನ್ನು ಅಗಲಿದರು.

ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ

ಪದ್ಯ ೩೬ ೩೭: ದುರ್ಯೋಧನನು ತನ್ನ ದುಃಖವನ್ನು ಹೇಗೆ ತೋಡಿಕೊಂಡನು?

ನೀನೊಳ್ಳೊಡುಂಟು ರಾಜ್ಯಂ
ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟುಯ್
ನೀನುಳ್ಳೊಡುಂಟು ಪೀಳಿಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ (ದುರ್ಯೊಧನ ವಿಲಾಪಂ, ಪದ್ಯ ೩೬)

ಹರಿ ಬೇಡೆ ಕವಚಮಂ ನೀ
ನರಿದಿತ್ತಯ್ ಕೊಂತಿ ಬೇಡೇ ಬೆಗಡೆದೆ ಕೊಟ್ಟಯ್
ಪುರಿಗಣೆಯಂ ನಿನಗೆಣೆ ಕಸ
ವರಗಲಿ ಮೆಯ್ಗಲಿಯುಮಾವನಂಗಾಧಿಪತೀ (ದುರ್ಯೊಧನ ವಿಲಾಪಂ, ಪದ್ಯ ೩೭)

ತಾತ್ಪರ್ಯ:
ದುರ್ಯೋಧನನು ತನ್ನ ದುಃಖವನ್ನು ತೋಡಿಕೊಳ್ಳುತ್ತಾ, ಎಲೈ ಕರ್ಣ, ನೀನಿದ್ದರೆ ನನಗೂ ರಾಜ್ಯ, ಪದವಿ, ಪಟ್ಟ, ಶ್ವೇತಛತ್ರಿ, ಚಾಮರ, ಸಿಂಹಾಸನ ಎಲ್ಲವೂ ಇರುತ್ತದೆ. ನೀನೆ ಇಲ್ಲದ ಮೇಲೆ ಇವೆಲ್ಲವಿದ್ದರೂ ಯಾವ ಪ್ರಯೋಜನಕ್ಕಾಗಿ, ಈ ವೈಭವ ಸಂಪತ್ತುಗಳಿಂದ ನನಗಾವ ಸುಖವೂ ಸಿಗುವುದಿಲ್ಲ.

ಎಲೈ ಕರ್ಣ ನೀನೆಂತಹ ದಾನಶೂರ, ಇಂದ್ರನು ತನ್ನ ಮಗನ ಒಳಿತಿಗಾಗಿ ವಟುವೇಷದಲ್ಲಿ ಬಂದು
ನಿನ್ನ ಸಹಜವಾದ ಕವಚ ಕುಂಡಲವನ್ನು ಬೇಡಿದಾಗ, ನೀನು ಸ್ವಲ್ಪವೂ ಹಿಂಜರಿಯದೆ ಅವನ್ನು ನಿನ್ನ ಮೈಯಿಂದ ಕತ್ತರಿಸಿ ಕೊಟ್ಟೆಯೆಲ್ಲಾ, ಕುಂತಿಯು ತನ್ನ ಮಗನ ಒಳಿತಿಗಾಗಿ ನಿನ್ನ ಬಳಿ ದಿವ್ಯಾಸ್ತ್ರವಾದ ಪುರಗಣೆ (ಸುಡುವ ಬಾಣ)ಯನ್ನು ಪ್ರಯೋಗಿಸಬಾರದೆಂದು ಕೇಳಿದಾಗ ಅವಳಿಗೂ ನೀನು ಮಾತುಕೊಟ್ಟೆಯೆಲ್ಲಾ, ಚಿನ್ನವನ್ನು ಕೊಡುವುದರಲ್ಲಿ ದಾನ ಶೂರನಾಗಿ ಪರಾಕ್ರಮಿಯಾಗಿ ಮೆರೆದೆಯೆಲ್ಲಾ, ಇದರಲ್ಲಿ ನಿನಗೆ ಸರಿಸಮಾನನಾದವರು ಯಾರು ಕರ್ಣಾ! ಎಂದು ತನ್ನ ದುಃಖವನ್ನು ತೋಡಿಕೊಂಡನು.

ಅರ್ಥ:
ರಾಜ್ಯ: ರಾಷ್ಟ್ರ; ಪಟ್ಟ: ಪದವಿ; ಬೆಳ್ಗೊಡೆ: ಶ್ವೇತಚ್ಛತ್ರ; ಪೀಳಿಗೆ: ಸಿಂಹಾಸನ; ಅಧಿಪತಿ: ರಾಜ, ಒಡೆಯ

ಹರಿ: ಕೃಷ್ಣ, ಇಂದ್ರ; ಅರಿದು: ಕತ್ತರಿಸಿ; ಅರಿ: ತಿಳಿ; ಮೆಯ್ಗಲಿ- ಪರಾಕ್ರಮಿ; ಬೇಡು: ಕೇಳು; ಅರಿ: ಕತ್ತರಿಸು;ಇತ್ತೆ: ನೀಡಿದೆ; ಬೆಗಡೆ: ಬೆಚ್ಚದೆ; ಕೊಟ್ಟಯ್: ನೀಡಿದೆ; ಪುರಿಗಣೆ: ಸುಡುವ ಬಾಣ; ಕಸವರಗಲಿ: ಚಿನ್ನವನ್ನು ದಾನಮಾಡುವುದರಲಿ;

ಪದವಿಂಗಡಣೆ:
ನೀನೊಳ್ಳೊಡ್+ಉಂಟು +ರಾಜ್ಯಂ
ನೀನುಳ್ಳೊಡೆ+ ಪಟ್ಟಮ್+ಉಂಟು +ಬೆಳ್ಗೊಡೆಯ್+ಉಂಟುಯ್
ನೀನುಳ್ಳೊಡ್+ಉಂಟು +ಪೀಳಿಗೆ
ನೀನಿಲ್ಲದ್+ಇವೆಲ್ಲಮೊಳವೆ +ಅಂಗಾಧಿಪತೀ

ಹರಿ +ಬೇಡೆ +ಕವಚಮಂ +ನೀನ್
ಅರಿದಿತ್ತಯ್ +ಕೊಂತಿ +ಬೇಡೇ +ಬೆಗಡೆದೆ+ ಕೊಟ್ಟಯ್
ಪುರಿಗಣೆಯಂ +ನಿನಗೆಣೆ+ ಕಸ
ವರಗಲಿ+ ಮೆಯ್ಗಲಿಯುಮ್+ಆವನ್+ಅಂಗಾಧಿಪತೀ

ಅಚ್ಚರಿ:
(೧) ಕರ್ಣನು ತನ್ನ ಬಾಳಿಗೆ ಹೇಗೆ ಭಾಗಿಯಾಗಿದ್ದ ಎಂದು ಸೂಚಿಸುತ್ತ ಶೋಕಿಸುವ ಪದ್ಯ
(೨) ಕರ್ಣನ ಗುಣಗಾನ ಮಾಡಿ ತನ್ನ ಶೋಕವನ್ನು ವ್ಯಕ್ತಪಡಿಸುವ ಪದ್ಯ