ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಣ್ಣ ಕತೆಯ ಪರಂಪರೆಯಲ್ಲಿ ವ್ಯಕ್ತಿವಿಶಿಷ್ಟತೆಯಿಂದ ಚಾರಿತ್ರಿಕ ಮಹತ್ವ ಪಡೆದ ಪ್ರತಿಭಾವಂತರಲ್ಲಿ ವೀಣಾ ಶಾಂತೇಶ್ವರರು ಒಬ್ಬರು. ಬಾಲ್ಯದಿಂದಳು ಪ್ರಗತಿಪರ ವೈಚಾರಿಕತೆಯ ಸ್ತ್ರೀವಾದಿಯಾಗಿ ಬೆಳೆದ ಅವರು ಸಹಜವಾಗಿ ಆಯ್ದುಕೊಂಡದ್ದು ನವ್ಯದ ಆತ್ಮಶೋಧದ ನೈಜವಾಸ್ತವವಾದವನ್ನು. ಶೈಲಿ ಮತ್ತು ಭಾಷೆಯ ಬಳಕೆಯಲ್ಲಿ ಅವರದು ವಿಭಿನ್ನ ದಾರಿ.
ವೀಣಾ ಅವರು ೧೯೫೪ರಲ್ಲಿ ಧಾರವಾಡದಲ್ಲಿ ಜನಿಸಿದರು. ಬಾಲ್ಯ ಶಿಕ್ಷಣ ಪಡೆದದ್ದು ಬಾಗಲಕೋಟೆಯಲ್ಲಿ. ತಂದೆ ಬಲರಾಮಾಚಾರ್ಯ ಯಲಬುರ್ಗಿ ಪ್ರಸಿದ್ಧ ಪ್ರಾಧ್ಯಾಪಕರು ಮತ್ತು ಮೇಧಾವಿ ವಿಜ್ಞಾನಿಯಾಗಿದ್ದರು ಅವರು ಆಯುರ್ವೇದದಲಿ ಅನೇಕ ಹೊಸ ಶೋಧನೆಗಳನ್ನು ಮಾಡಿ ಧನ್ವಂತರಿ ಎನ್ನುವ ಖ್ಯಾತಿ ಪಡೆದಿದ್ದರು. ತಾಯಿ ಇಂದಿರಾ ಮರಾಠಿ ಮಾತೃಭಾಷೆಯ ಸಾಹಿತ್ಯ ಮತ್ತು ಶಿಕ್ಷಣ ಪ್ರೇಮಿಯಾಗಿದ್ದರು. ತಾಯಿಯ ಸ್ತ್ರೀಪರತೆ, ವೈಚಾರಿಕತೆಯಿಂದ ಪ್ರಭಾವಿತರಾದಂತೆ, ತಂದೆಯವರ ವೈಜ್ಞಾನಿಕ ಮನೋಭಾವ, ಧರ್ಮಶ್ರದ್ಧೆ, ಕರ್ತವ್ಯನಿಷ್ಠೆ, ಸಾಮಾಜಿಕ ಕಾಳಜಿಯ ಗುಣಗಳಿಂದ ಪ್ರೇರಣೆ ಪಡೆದರು. ೧೯೬೦ರಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ರಾಂಕ್, ಪಿ.ಯು ಪರೀಕ್ಷೆಯಲ್ಲಿ ೨ನೇ ರಾಂಕ್ ಪಡೆದು ಬಿ.ಎ ಪದವಿಯನ್ನು ಆಕ್ಕೆ ಮಾಡಿ ಪ್ರಥಮ ರಾಂಕ್ನಿಂದ ತೇರ್ಗಡೆಯಾಗಿ, ಸ್ನಾತಕೋತ್ತರ ಪದವಿಯನ್ನು ಇಂಗ್ಲೀಷ್ ಅಧ್ಯಯನದಲ್ಲಿ ಮೊದಲ ರಾಂಕ್ ನಲ್ಲಿ ತೇರ್ಗಡೆಯಾದರು.
ತಾವು ವಿದ್ಯಾರ್ಥಿಯಾಗಿದ್ದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿ ಸೇವೆ ಪ್ರಾರಂಭ ಮಾಡಿ ೩೯ ವರ್ಷ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಇಂಗ್ಲೀಷ್, ಮರಾಠಿ, ಮತ್ತು ಹಿಂದಿ ಕೃತಿಗಳನ್ನು ಅನುವಾದಿಸಿದರು. ಕತೆಗಾರ್ತಿಯಾಗಿ ಪ್ರಸಿದ್ಧರಾಗಿರುವ ವೀಣಾ ಕಳೆದ ನಾಲ್ಕು ದಶಕಗಳಲ್ಲಿ ಪ್ರಕಟಿಸಿರುವ ಕಥಾಸಂಕಲನಗಳು ಆರು. ಮುಳ್ಳುಗಳು ಮೊದಲ ಸಂಕಲನ ಅವರನ್ನು ಕನ್ನಡ ಸಣ್ಣಕತೆಯ ಪರಂಪರೆಯಲ್ಲಿ ಪ್ರಮುಖರನ್ನಾಗಿ ಪ್ರತಿಷ್ಠಾಪಿಸಿದರೆ, ನಂತರದ ಕೊನೆಯ ದಾರಿ, ಕವಲು, ಹಸಿವು, ಬಿಡುಗಡೆ ನಡೆದದ್ದೇ ದಾರಿ ಸಂಕಲನಗಳು ಅವರ ಕಥನ ಸಾಮರ್ಥ್ಯ, ಪ್ರಖರ ವೈಚಾರಿಕತೆ ಮತ್ತು ಸ್ತ್ರೀಪರ ಕಾಳಜಿಗಳನ್ನು ಪರಿಚಯಿಸಿದವು. ಅವರ ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಕತೆ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಉತ್ತಮ ಅನುವಾದಕ್ಕಾಗಿ “ನದೀ ದ್ವೀಪಗಳು” ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.
ಬೇರೆ ಬೇರೆ ಸಾಹಿತ್ಯಕ ಸಂಸ್ಥೆಗಳಿಗಾಗಿ ವೀಣಾ ವರು ಪ್ರಾತಿನಿಧಿಕ ಕಥಾ ಸಂಕಲನಗಳನ್ನು ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಹೊಸ ಹೆಜ್ಜೆ, ಲೇಖಕಿಯರ ಕಥಾಸಂಕಲನ ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಕಥೆಗಳನ್ನಾಧರಿಸಿ ವೀಣಾ ರಚಿಸಿರುವ ರೇಡಿಯೋ ನಾಟಕಗಳು ೧೦. ನಾಡಿನ ದೇಶದ ಅನೇಕ ಪ್ರತಿಷ್ಟಿತ ಸಂಘ ಸಂಸ್ಥೆಗಳೊಂದಿಗೆ ಕ್ರಿಯಾಶೀಲ ಸಂಬಂಧ ಹೊಂದಿರುವ ಅವರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.
ಕೃಪೆ:
ಕನ್ನಡ ದೀಪಗಳು
ಸಂಪಾದಕರು: ಮೋಹನ ನಾಗಮ್ಮನವರ
ಪ್ರಕಾಶಕರು: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಡ