ಹುಲಿ ವೇಷ (ತುಳು:ಪಿಲಿ ವೇಷ) ತುಳುನಾಡಿನ ಬಹಳ ಶ್ರೇಷ್ಠವಾದ ಮತ್ತು ಜನಪ್ರಿಯ ಜಾನಪದ ಕಲೆ. ಹುಲಿ ವೇಷವನ್ನು ತಾಯಿ ಶಾರದೆಯ (ಸರಸ್ವತಿಯ ಇನ್ನೊಂದು ರೂಪವಾಗಿದ್ದು ಹುಲಿಯು ಈ ದೇವಿಯ ವಾಹನ) ಗೌರವಾರ್ಥವಾಗಿ ನಡೆಸಿಕೊಡಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯಲ್ಲಿ ಮತ್ತು ಗಣೇಶ ಚತುರ್ಥಿಯಂದು ಮೂಡುಬಿದಿರೆಯಲ್ಲಿ ನಡೆಸುವುದು ತುಳುನಾಡಿನ ವಾಡಿಕೆ.
5ರಿಂದ 10 ಮಂದಿಯ ಯುವಕರ ಗುಂಪಿನಲ್ಲಿ, 3ರಿಂದ 5 ಮಂದಿ ಹುಲಿಯ ಬಣ್ಣವನ್ನು ಹಚ್ಚಿಕೊಂಡು, 2ರಿಂದ 3 ಮಂದಿ ಚಂಡೆ ವಾದಕರಿದ್ದು ಒಬ್ಬ ಮುಖ್ಯಸ್ತನ ಮೇಲ್ವಿಚಾರಣೆಯಲ್ಲಿ ಮುಂದೆ ಸಾಗುತ್ತಿರುತ್ತದೆ. ನವರಾತ್ರಿಯಂದು ಪಟ್ಟಣದ ಓಣಿಗಳಲ್ಲಿ/ಬೀದಿಗಳಲ್ಲಿ ಚಂಡೆ ವಾದನದೊಂದಿಗೆ ಇವರು ಗುಂಪಿನಲ್ಲಿ ಸಾಗುತಿರುತ್ತಾರೆ. ಮನೆ ಮತ್ತು ಅಂಗಡಿಗಳ ಎದುರು ಅಥವ ರಸ್ತೆಯ ಬದಿಯಲ್ಲಿ ಸುಮಾರು 10 ನಿಮಿಷ ಪ್ರದರ್ಶವನ್ನು ಕೊಟ್ಟು ಜನರಿಂದ ಕಾಣಿಕೆಯನ್ನು/ದುಡ್ಡನ್ನು ಸ್ವೀಕರಿಸುತ್ತಾರೆ.
ಮುಂಚಿನ ಕಾಲದಲ್ಲಿ ಹುಲಿ ವೇಷವನ್ನು ಹರಕೆಗಾಗಿ ಆಚರಿಸಲಾಗುತ್ತಿತ್ತು.ಹುಲಿ ವೇಷದ ಚಂಡೆ ಮರ್ದನವು ಬಹಳ ದೂರದವರೆಗೂ ಕೇಳಿಸುತ್ತದೆ ಮತ್ತು ಆ ಸ್ಥಳಕ್ಕೆ ಹುಡುಗರು ತಂಡೋಪತಂಡವಾಗಿ ಬಂದು ಹುಲಿವೇಷದೊಂದಿಗೆ ನಡೆಯುತ್ತ ಮುಂದೆ ಸಾಗುತ್ತಾರೆ. ತುಳು ನಾಡಿನ ಪ್ರತಿಯೊಬ್ಬ ಹುಡುಗನು ಹುಲಿ ವೇಷದ ತಾಳವನ್ನು ಬಾಯಲ್ಲಿ ನುಡಿಸಲಿ ಕಲೆತಿರುತ್ತಾನೆ.
ಹುಲಿ ವೇಷ ನೃತ್ಯದ ಸಮಯದಲ್ಲಿ ನರ್ತಕನು ಹಲವು ಶೌರ್ಯ ಪ್ರದರ್ಶನಗಳನ್ನು ಮಾಡುತ್ತಾನೆ. ಅದರಲ್ಲಿ ‘ಗಾವು ಜಿಗಿತ’ ಒಂದು.ನರ್ತಕನು ಕುರಿಯನ್ನು ತನ್ನ ಬಾಯಿಂದ ಕಚ್ಚಿ ಎತ್ತಿ ಗಾಳಿಯಲ್ಲಿ ತೋರಿ ಸಾಯಿಸುವ ಒಂದು ಪ್ರದರ್ಶನ. ಇದನ್ನು ಹುಲಿಯ ಬೇಟೆಯಾಡಿ ಕೊಂದು ತಿನ್ನುವ ಪರಿಯನ್ನು ತೋರಿಸುವ ಸಲುವಾಗಿ ಪ್ರದರ್ಶಿಸುತ್ತಾರೆ ವಿನಃ ಕುರಿಯನ್ನು ಸಾಯಿಸಲಾಗುವುದಿಲ್ಲ. ಇದನ್ನು ಕೇವಲ ಸಾಂಕೇತಿಕವಾಗಿ ಪ್ರದರ್ಶಿಸಲಾಗುತ್ತದೆ. ಇದಲ್ಲದೆ ನರ್ತಿಸುತ್ತ ಹಿಂದಕ್ಕೆ ಬಾಗಿ ಬಾಯಲ್ಲಿ ಹಣದ ನೋಟನ್ನು ಕಚ್ಚಿ ಹಿಡಿಯುವಂತಹ ಅನೇಕ ಜನಪ್ರಿಯ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ.