ಕರ್ನಾಟಕದ ಜಾನಪದ ಕಲೆಗಳಲ್ಲಿ ಗಾರುಡಿ ಗೊಂಬೆ ಒಂದು. ದಕ್ಷಿಣ ಕನ್ನಡದಲ್ಲಿ ಇದನ್ನು ತತ್ತಿರಾಯ ಎಂದು ಸಹ ಕರೆಯುತ್ತಾರೆ. ಬೊಂಬಿನ ಬೆಂಬಲದಿಂದ ಮಣ್ಣಿನಲಿ ನಿರ್ಮಿಸಿದ ಸುಮಾರು 40 ಕಿಲೋ ತೂಕದ ಗಾರುಡಿ ಗೊಂಬೆಗಳನ್ನು ಹೆಗಲ ಮೇಲೆ ಹೊತ್ತು ಕುಣಿಯುವುದು ಈ ಕಲೆಯ ವಿಶೇಷತೆ. ಗಾರುಡಿ ಗೊಂಬೆ ಹೊರುವವರನ್ನು ದಕ್ಷಿಣ ಕನ್ನಡದಲ್ಲಿ ತತ್ತೀರಾಯ ಎಂದು ಕರೆಯುತ್ತಾರೆ.
ಹಿರಿಯ ಸಂಶೋಧಕರ ಪ್ರಕಾರ, ಈ ಗಾರುಡಿ ಗೊಂಬೆ ಕಲೆಯನ್ನು ಮಹಾಭಾರತದಲ್ಲಿ ನಮೂದಿಸಲಾಗಿದೆ. ಸತ್ಯಭಾಮೆಯು ಕೋಪಗೊಂಡಾಗೆಲ್ಲ, ಶ್ರೀ ಕೃಷ್ಣನು ಗಾರುಡಿ ಗೊಂಬೆ ಹೊತ್ತು ಸಮಾಧಾನ ಪಡಿಸುತ್ತಿದ್ದನಂತೆ.
ಈ ಕಲೆಯಲ್ಲಿ ಗಾರುಡಿ ಗೊಂಬೆಯ ಮುಖ ಮರದಿಂದ ಮಾಡಲ್ಪಟ್ಟಿರುತ್ತದೆ. ಆ ಮರದ ಆಕೃತಿಗೆ ಬಣ್ಣಗಳನ್ನು ಹಚ್ಚಿ ಅಂದವಾದ ಬರವಣಿಗೆ ಚಿತ್ತಾರಗಳನ್ನು ಮೂಡಿಸಿ, ಮುಖದ ಆಕಾರವನ್ನು ಮೂಡಿಸಲಾಗುತ್ತದೆ. ಗಾರುಡಿ ಗೊಂಬೆಗಳು ಸುಮಾರು ಹತ್ತರಿಂದ ಹನ್ನೆರಡು ಅಡಿ ಎತ್ತರವಿರುತ್ತದೆ. ಮತ್ತು ಅದರ ತೂಕ ಸುಮಾರು 40 ಕಿಲೋ. ಗಾರುಡಿ ಬೊಂಬೆ ಆಡಿಸುವಾತ ಗಾರುಡಿ ಗೊಂಬೆಯ ಆಕೃತಿಯೊಳಗೆ ಹೊಕ್ಕು ತನ್ನ ಹೆಗಲ ಮೇಲೆ ಹೊತ್ತು ಸುಮಾರು ಹೊತ್ತು ಕುಣಿಯುತ್ತಾನೆ. ಹೊರಗಿನ ಲೋಕದ ವೀಕ್ಷಣೆಗಾಗಿ ಗಾರುಡಿ ಗೊಂಬೆಯಲ್ಲೇ ಸಣ್ಣ ಕಿಂಡಿಗಳನ್ನು ಮಾಡಿರುತ್ತಾರೆ.
ಗೊಂಬೆಗಳು ಹೆಚ್ಚು ತೂಕವಿರುವುದರಿಂದ, ಸಾಮಾನ್ಯವಾಗಿ ಹೊರುವವರು ಗಂಡಸರೇ ಆಗಿರುತ್ತಾರೆ. ಗೊಂಬೆ ಹೊತ್ತು ಸುಮಾರು 8 ಘಂಟೆಗಳವರೆಗೂ ಕುಣಿಯುವ ಸಾಧಕರಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಆಟಗಳು ಮನುಜನ ಹಾಸ್ಯ ಪ್ರವೃತ್ತಿಯನ್ನು ಸೂಚಿಸಿ, ನೋಡುವವರಿಗೆ ಒಂದು ನಗುವಿನ ವಾತಾವರಣವನ್ನು ಸೃಷ್ಠಿಸುತ್ತದೆ. ಕೆಲವು ಕಡೆ ಈ ಕಲೆಯನ್ನು ದುಷ್ಟ ಶಕ್ತಿಗಳ ವಿನಾಶಕ್ಕೆ ಸಹ ಬಳಸುವ ಪ್ರತೀತಿ ಇದೆ.